ಧಾರವಾಡ: ಹಿಂದೂ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿ ಅವರೇ, ನಿಮಗೆ ತಾಕತ್ ಇದ್ದರೆ ಎದುರು ಬನ್ನಿ, ನಾವು ಏನು ಮಾಡಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರೇ ನೀವು ರಾಜಕೀಯವಾಗಿ ಏನಾದರೂ ಮಾಡಿಕೊಳ್ಳಿ, ಆದರೆ ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡುವ ನೀವು ಎಸ್ಡಿಪಿಐ, ಪಿಎಫ್ಐ ಬಗ್ಗೆ ಮಾತನಾಡಿದ್ದೀರಾ? ವೋಟ್ ಬ್ಯಾಂಕ್ ರಾಜಕಾರಣ ನೀವು ಮಾಡುತ್ತಿದ್ದೀರಿ. ಹಿಂದೂ ಸಂಘಟನೆಗಳನ್ನು ಬೈದರೆ ಮುಸ್ಲಿಂ ವೋಟ್ ಬರುತ್ತವೆ ಎಂಬ ಭ್ರಮೆಯಲ್ಲಿದ್ದೀರಿ. ದೇಶಭಕ್ತಿ ಕೆಲಸ ಮಾಡುವವರನ್ನು ನೀವು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆಗಳು ತಪ್ಪು ಇವೆ ಎನ್ನುವುದಾದರೆ ಎದುರಿಗೆ ಬನ್ನಿ. ನಾವು ಏನು ಮಾಡಿದ್ದೇವೆ ಅನ್ನುವುದನ್ನು ಹೇಳುತ್ತೇವೆ. ಕುಮಾರಸ್ವಾಮಿ ಅವರೇ ನೀವು ಭ್ರಷ್ಟರಿದ್ದೀರಿ. ನಾವು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಹಿಂದೂ ಸಂಘಟನೆಗಳು ರಾವಣ ಸೇನೆ ಎಂಬ ನಿಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಜನ ಮೂರ್ಖರಲ್ಲ: ಡಿಕೆಶಿಗೆ ಬಿಜೆಪಿ ತಿರುಗೇಟು
ಕುಮಾರಸ್ವಾಮಿ ಅವರೇ ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಿ ಬರುತ್ತೇನೆ ಎಂದಿದ್ದಾರೆ. ಹಿಂದೂ ಸಮಾಜ ಅವರಿಗೆ ಏನು ತೊಂದರೆ ಕೊಟ್ಟಿದೆ? ಮೊದಲು ನಿಮ್ಮ ತಂದೆಗೆ ಬುದ್ಧಿವಾದ ಹೇಳಿ. ರಾಜಕೀಯವಾಗಿ ನೀವು ಬೇಕಾದ್ದನ್ನು ಮಾತನಾಡಿಕೊಳ್ಳಿ ಆದರೆ, ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ: ಹೆಚ್.ಡಿ ಕುಮಾರಸ್ವಾಮಿ