ಬಾಗಲಕೋಟೆ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹಾಗೂ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಅಧ್ಯಕ್ಷ ಪುನಿತ್ ಕೆರೆಹಳ್ಳಿಗೆ (Puneeth Kerehalli) ಬಾಗಲಕೋಟೆ (Bagalkote) ಜಿಲ್ಲೆಗೆ ನಿರ್ಬಂಧ ವಿಧಿಸಿ ಡಿಸಿ ಸಂಗಪ್ಪ ಆದೇಶಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಗೂ ಸಮಾಜದಲ್ಲಿ ಅಶಾಂತಿ ಹರಡಬಾರದೆಂದು ಮುಂಜಾಗೃತ ಕ್ರಮದ ಕಾರಣ ಹೇಳಿ ಇಬ್ಬರಿಗೂ ಜಿಲ್ಲಾಡಳಿತ ನಿಷೇಧ ಹೇರಿದೆ. ಇಂದಿನಿಂದ (ಫೆಬ್ರುವರಿ 21) ರಿಂದ ಮಾರ್ಚ್ 21ರ ವರೆಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಸೆಕ್ಷನ್ 163 ಅಡಿಯಲ್ಲಿ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ಬಾಗಲಕೋಟೆಯ ಕಿತ್ತಾ ಓಣಿಯಲ್ಲಿ ಶಿವಾಜಿ ಜಯಂತಿ (Shivaji Jayanti) ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone pelting) ಸಂಚಲನ ಮೂಡಿಸಿದೆ. ಫೆ.20ರಂದು ಕರೆದಿದ್ದ ಶಾಂತಿ ಸಭೆ ವಿಫಲ ಬೆನ್ನಲ್ಲೇ ಇಂದೂ ಸಹ ಡಿಸಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಆದ್ರೆ ಇಂದಿನ ಸಭೆಗೆ ಹಿಂದೂ ಮತ್ತು ಬಿಜೆಪಿ ಮುಖಂಡರು ಯಾರೂ ಸರಿಯಾಗಿ ಬಾರದ ಕಾರಣ ಇಂದಿನ ಸಭೆ ಕೂಡ ವಿಫಲವಾಗಿದೆ.
ಪಂಕಾ ಮಸೀದಿ ಬೀದಿಯಲ್ಲಿ ವಾತಾವರಣ ಸಹಜ ಸ್ಥಿತಿಗೆ ಬಂದಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮಸೀದಿ ಹಾಗೂ ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಬಾಗಲಕೋಟೆ ಎಸ್ಪಿ ಪರಿಶೀಲನೆ ನಡೆಸಿದ್ರು. ಆದ್ರೆ ಮಸೀದಿ ಅಕ್ಕಪಕ್ಕದ ಶಾಲೆಗಳು ಖಾಲಿ ಖಾಲಿಯಾಗಿವೆ. ಮತ್ತೆ ಗಲಾಟೆಯಾಗೋ ಆತಂಕದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕ್ತಿದ್ದಾರೆ.

