– ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಆತ ಉಗ್ರನೇ
ಕೊಪ್ಪಳ: ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಅವನು ಉಗ್ರನೇ. ಅವನನ್ನು ಸಮರ್ಥಿಸಿಕೊಳ್ಳುವುದು, ರಕ್ಷಣೆಗೆ ಪರೋಕ್ಷವಾಗಿ ಬೆಂಬಲಿಸುವುದು, ರಾಜಕೀಯ ಮಾಡುವುದು ಹೇಯ ಕೃತ್ಯ. ಕರ್ನಾಟಕಕ್ಕೆ ನಾಲಾಯಕ್, ಅಯೋಗ್ಯನನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ಮುತಾಲಿಕ್ ಅವರು ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ರಾಜಕೀಯ ಮಾಡ್ತಿರೋದು ಹೇಯ ಕೃತ್ಯ. ಅದು ಆದಿತ್ಯ ರಾವ್ ಇರಬಹುದು, ಅಬ್ದುಲ್ ಇರಬಹುದು. ಇದರಲ್ಲಿ ರಾಜಕಾರಣ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಶಿಕ್ಷೆಯಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಏರ್ಪೋರ್ಟ್ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್ಡಿಕೆ
ಪೊಲೀಸ್ ಇಲಾಖೆ ವಿರುದ್ಧ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಮುತಾಲಿಕ್, ಎಚ್ಡಿಕೆ ಮಾತನಾಡಿರೋದು ಬಹಳ ಅಸಹ್ಯವಾಗಿದೆ. ಕರ್ನಾಟಕಕ್ಕೆ ನಾಲಾಯಕ್, ಅಯೋಗ್ಯನನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ. ಈ ರೀತಿ ಹೇಳಿಕೆ ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ ಎಂದರು. ಇದನ್ನೂ ಓದಿ: ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್ಡಿಕೆ ಪ್ರಶ್ನೆ
ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡ್ತಿವೆ. ಆದರೆ ಬಿಜೆಪಿ ಸರ್ಕಾರ ಭಯೋತ್ಪಾದಕರನ್ನ ಒದ್ದು ಒಳಗೆ ಹಾಕ್ತಿದೆ. ಪ್ರಧಾನಿ ಮೋದಿ ಅವರ ಕೆಲಸಕ್ಕೆ ವಿರೋಧ ಮಾಡೋದು ವಿಪಕ್ಷಗಳ ನಿರ್ಲಕ್ಷ್ಯದ ಕೆಲಸ ಎಂದು ಮಾತಿನ ಚಾಟಿ ಬೀಸಿದರು.
ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಹೋರಾಟಕ್ಕೆ ಮುಸ್ಲಿಂರನ್ನು ಎತ್ತಿ ಕಟ್ಟಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ರಾಜಕೀಯ ನೆಲೆಗಾಗಿ ಪೌರತ್ವ ವಿರೋಧಿಸ್ತಿದೆ ಎಂದು ಮುತಾಲಿಕ್ ಆರೋಪಿಸಿದರು.