ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಕಾರ್ಪೊರೇಟ್ರ ಇರಲಿ, ಅವರ ತಾತ ಮುತ್ತಾತ ಇರಲಿ, ಅವರನ್ನು ಎತ್ತಾಕಿಕೊಂಡು ಬಂದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘಟನೆ ಬಗ್ಗೆ ಗುಡುಗಿದ್ದಾರೆ.
ಹುಬ್ಬಳ್ಳಿ ದಿಡ್ಡಿ ಹನುಮಂತ ದೇವಸ್ಥಾನ ಭೇಟಿ ಬಳಿಕ ಮಾತನಾಡಿದ ಅವರು, ಕೋಮುವಾದಿ ಮತಾಂಧರು ನಿನ್ನೆ ಗ್ರಾಫಿಕ್ ಆ್ಯನಿಮೇಶನ್ ನೆಪ ಇಟ್ಟುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ದೇವಸ್ಥಾನ, ನಾಗರಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ನಾವು ಎಲ್ಲ ವಿವರ ಪಡೆದಿದ್ದೇವೆ ಎಂದಿದ್ದಾರೆ.
ಯಾರೇ ಇದ್ದರು ಅವರನ್ನು ಒಳಗಡೆ ಹಾಕಬೇಕು, ಪೊಲೀಸರಿಗೆ ಗಾಯವಾದರೂ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಹೊರಗಿನಿಂದ ಬಂದವರು ಯಾರು, ಕರೆ ಕೊಟ್ಟವರು ಯಾರು, ವಾಟ್ಸಪ್ ಮೆಸೇಜ್ ಮಾಡಿದವರು ಯಾರು ಎಂಬೆಲ್ಲ ವಿಚಾರವಾಗಿ ತನಿಖೆ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿ ಕೊಟ್ಟು ಪೊಲೀಸ್ ಠಾಣೆ ಬಲಪಡಿಸುವ ಕೆಲಸ ಮಾಡುತ್ತೇವೆ. ಪಿಎಫ್ಐ, ಎಸ್ಡಿಪಿಐ ಸಂಘಟನೆ ನಿಷೇಧಕ್ಕೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.