ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ (Siddaramaiah Budget) ಮಂಡಿಸಿದ್ರಾ ಅಥವಾ ಬಿಜೆಪಿಗೆ (BJP) ಬೈದ್ರಾ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಬಜೆಟ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಜೆಟ್ ಮಂಡನೆಗಿಂತ ಬಿಜೆಪಿಯನ್ನು ಬೈದಿದ್ದೇ ಹೆಚ್ಚು. ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ. ಅಲ್ಲದೆ ಬೇರೆ ದೇಶಗಳಿಗೂ ಸಹ ಕೊಟ್ಟಿದ್ದೇವೆ. ಇದನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯನವರು ಭಾರತ ದ್ವೇಷಿ ರಾಹುಲ್ ಗಾಂಧಿ (Rahul Gandhi) ತರಹ ಮಾತನಾಡುತ್ತಿದ್ದಾರೆ. ಅಬಕಾರಿ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಅನ್ನೋದು ಇದು. ಎನ್ ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು, ಆದರೆ ಇವತ್ತು ಕೈ ಬಿಟ್ಟಿದ್ದಾರೆ. ಸಂಪೂರ್ಣ ತುಷ್ಠೀಕರಣ ಬಜೆಟ್ ಮಂಡನೆ ಮಾಡಿದ್ದಾರೆ. ಅಭಿವೃದ್ಧಿ ಪೂರ್ವಕವಲ್ಲ ಎಂದು ಹೇಳಿದರು. ಇದನ್ನೂ ಓದಿ: ಆನ್ಲೈನ್ನಲ್ಲಿ ವಿದ್ಯುತ್ ಬಿಲ್ ಕಟ್ಟುವ ಮುನ್ನ ಎಚ್ಚರ – 53 ಸಾವಿರ ಎಗರಿಸಿದ ಸೈಬರ್ ಕಳ್ಳರು!
ಮೂಲಭೂತ ಸೌಕರ್ಯಗಳು ನೆಲಕಚ್ಚುವ ಬಜೆಟ್ ಇದು. ಶಾಸಕರಿಗೆ ಅನುದಾನ ಕೇಳಬೇಡಿ ಅಂತ ನೇರವಾಗಿ ಹೇಳತ್ತಿದ್ದಾರೆ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂಬುವುದಕ್ಕೆ ಸಾಕ್ಷಿ. ಯುವಶಕ್ತಿಗೆ ನಯಾಪೈಸೆ ಹಣ ಇಟ್ಟಿಲ್ಲ, ಗೃಹ ಲಕ್ಷ್ಮಿಗೆ ಈಗ ಹಣ ಇಟ್ಟಿದ್ದಾರೆ. ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ. ರಾಜ್ಯವನ್ನು ಸಾಲದಕೂಪಕ್ಕೆ ತಳ್ಳಿ ಸಿದ್ದರಾಮಯ್ಯ ತನ್ನ ರಾಜಕೀಯ ಚಟ ತೀರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
10 ಕೆಜಿ ಅಕ್ಕಿ ಬಗ್ಗೆ ಬಜೆಟ್ ನಲ್ಲಿ ಹೇಳಿದ್ದಾರೆ. ಈ ಪೈಕಿ ಐದು ಕೆ.ಜಿ ಕೇಂದ್ರ ಸರ್ಕಾರದ್ದಿದೆ. ಅವರೇನು ಕೊಡುತ್ತಾರೆ ಎಂಬುವುದನ್ನು ಹೇಳತ್ತಿಲ್ಲ, ಬರಿ ಬಿಜೆಪಿಯನ್ನು ಬೈತಾರೆ. ಸಿದ್ದರಾಮಯ್ಯನವರು ಹಿಟ್ಲರ್ ರೀತಿಯಲ್ಲಿ ಆಡಳಿತ ಮಾಡಲು ತೀರ್ಮಾನ ಮಾಡಿದ್ದಾರೆ. ಬಿಜೆಪಿಗೆ ಸತತವಾಗಿ ಬೈಯೋದನ್ನೆ ಕಾಯಕ ಮಾಡಿಕೊಂಡಿದ್ದಾರೆ ಇದನ್ನು ಎದುರಿಸಲು ನಾವು ಸಿದ್ಧ ಎಂದು ಜೋಶಿ ಸವಾಲೆಸೆದರು.
Web Stories