ಬಳ್ಳಾರಿ: ಸಿದ್ದರಾಮಯ್ಯರ ಅವರ ಆಡಳಿತ ಅವಧಿಯಲ್ಲಿ ಅವರು ಯಾವುದೇ ಸಗಣಿ ತಿಂದಿಲ್ಲ. ಆದರೆ ಅವರ ಪಕ್ಷದ ಕೆಲ ನಾಯಕರು ತಿಂದಿರಬಹುದು ಎಂದು ಬಹು ಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತಮ್ಮ ಆಡಳಿತ ಅವಧಿಯಲ್ಲಿ ಸ್ವಲ್ಪವಾದರೂ ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ನನಗೆ ವೈಯಕ್ತಿಕವಾಗಿ ಪರಿಚಯವಿದ್ದಾರೆ. ಅವರು ಭ್ರಷ್ಟಚಾರ ನಡೆಸಿ ಸಗಣಿ ತಿಂದಿಲ್ಲ. ಆದರೆ ಅವರ ಪಕ್ಷದ ಕೆಲ ನಾಯಕರು ತಿಂದಿರಬಹುದು. ಅದ್ದರಿಂದ ಮೊದಲು ದೇಶದಲ್ಲಿ ದೊಡ್ಡ ಕಳ್ಳರನ್ನು ಅಧಿಕಾರದಿಂದ ಕೆಳಗಿಳಿಸಿ ಬಳಿಕ ಎರಡನೇ, ಮೂರನೇ ಹಂತದ ಕಳ್ಳರನ್ನು ಕೆಳಗಿಳಿಸಬೇಕಿದೆ ಎಂದು ಮೂರು ರಾಜಕೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.
ತಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಒಬ್ಬ ಮತದಾರನಾಗಿ ಪ್ರಶ್ನಿಸುತ್ತಿದ್ದೇನೆ. ಚುನಾವಣೆಯ ಬಳಿಕ ಯಾವುದೇ ಪಕ್ಷವೂ ಆಡಳಿತಕ್ಕೆ ಬಂದರೂ ನಮ್ಮ ಅಭಿಯಾನ ಮುಂದುವರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ನೀಡಿದ ಆಶ್ವಾಸನೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸಿಲ್ಲ. ನೋಟು ನಿಷೇಧ, ಜಿಎಸ್ಟಿ ಮೂಲಕ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಕರ್ನಾಟಕ ಭಾಷೆ ಕುರಿತು ಮಾತನಾಡುತ್ತಾರೆ. ಆದರೆ ಭಾಷೆ ಇಲ್ಲಿ ಮುಖ್ಯವಲ್ಲ. ಜನರ ಮನಸ್ಸನ್ನು ಅರ್ಥೈಸಿಕೊಳ್ಳುವುದು ಮುಖ್ಯ ಎಂದರು.
ನಾನು ಪ್ರಶ್ನೆ ಮಾಡುವುದಿರಂದ ಬಿಜೆಪಿಯವರು ನನ್ನ ಹೆಂಡತಿ, ಸತ್ತ ಮಗನ ಬಗ್ಗೆ ಕೇಳುತ್ತಾರೆ. ನಾನು ನಿಮ್ಮ ಹೆಂಡತಿ ಬಗ್ಗೆ ಏನು ಕೇಳಿಲ್ಲ, ಆದ್ರೆ ನೀವೂ ನನ್ನ ಪ್ರಶ್ನೆ ಮಾಡತ್ತೀರಾ? ನನ್ನ ಮಗ ಸತ್ತಾಗ ನಾನು ಯಾರ ಮಗ್ಗುಲಿನಲ್ಲಿ ಮಲಗಿದ್ದೆ ಎಂದು ಪ್ರಶ್ನೆ ಮಾಡುತ್ತಾರೆ. ನಾನು ಧರ್ಮ ವಿರೋಧಿ ಎಂದು ಬೈಯುತ್ತಾರೆ. ಅದ್ದರಿಂದ ನಾನು ಬಿಜೆಪಿ ನೀಡಿರುವ ಆಶ್ವಾಸನೆಗಳನ್ನು ಮೊದಲು ಪ್ರಶ್ನಿಸುತ್ತೇನೆ ಬಳಿಕ, ಇತರೇ ಪಕ್ಷಗಳ ಕುರಿತು ಮಾತನಾಡುತ್ತೇನೆ ಎಂದರು.
ದೇಶದಲ್ಲಿ ಜನರು ಯಾವುದೇ ರಾಜಕೀಯ ಪಕ್ಷವನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದ ಜನರು ಪ್ರಶ್ನೆ ಮಾಡುವಂತೆ ಮಾಡುತ್ತಿದ್ದೇನೆ. ದೇಶದ ಜನರ ಪ್ರಶ್ನೆಗೆ ಉತ್ತರಿಸಿದರೆ ಮುಂದೇ ಇತರೇ ಪಕ್ಷಗಳನ್ನು ಪ್ರಶ್ನಿಸುತ್ತವೆ. ನಾನು ಬಿಜೆಪಿ ಪಕ್ಷಕ್ಕೆ ಮಾತ್ರ ಮತ ನೀಡಬೇಡಿ ಎಂದು ಹೇಳುತ್ತೇನೆ. ಆದರೆ ಇಂತಹದ್ದೇ ಪಕ್ಷಕ್ಕೆ ಮತ ನೀಡಿ ಎಂದು ಹೇಳುವುದಿಲ್ಲ. ಜನರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.