ಉಡುಪಿ: ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದು ರಾತ್ರಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನದ ಘಳಿಗೆ ಹೇಗಿದೆ? ಮೋದಿಯ ಮುಂದಿನ ಐದು ವರ್ಷಗಳ ಆಡಳಿತ ಹೇಗಿರಲಿದೆ ಎಂಬುದನ್ನು ಉಡುಪಿ ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಜಾತಕ ನೋಡಿ ಲೆಕ್ಕಾಚಾರ ಹಾಕಿದ್ದಾರೆ.
ನರೇಂದ್ರ ಮೋದಿ ಅವರು 2014ರಂತೆ ಈ ಬಾರಿಯೂ ಗೋಧೂಳಿ ಲಗ್ನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಂಜೆ ಏಳಕ್ಕೆ ವೃಶ್ಚಿಕ ರಾಶಿ ಅನುರಾಧ ನಕ್ಷತ್ರ ಮೂರನೇ ಪಾದದಲ್ಲೇ ಇರುವ ಲಗ್ನ. ಅದೇ ರಾಶಿಯಲ್ಲಿ ಗುರು ಕೂಡ ಇರುತ್ತಾನೆ. ರೇವತಿ ನಕ್ಷತ್ರ ನಾಲ್ಕನೇ ಪಾದದಲ್ಲಿ ಚಂದ್ರ ಇರಲಿದ್ದಾನೆ. ಲಗ್ನಕ್ಕೆ ಸಪ್ತಮದಲ್ಲಿ ರವಿ, ಬುಧ. ಆರನೇ ಮನೆಯಲ್ಲಿ ಶುಕ್ರ. ಎಂಟರಲ್ಲಿ ರಾಹುವಿನ ಜತೆಗೆ ಕುಜ. ದ್ವಿತೀಯ ಸ್ಥಾನದಲ್ಲಿ ಶನಿಯ ಜತೆಗೆ ಕೇತು ಇರಲಿದ್ದಾನೆ.
ಈ ಮುಹೂರ್ತಕ್ಕೆ ಶುಭ ಅಶುಭ ಫಲಗಳೆರಡೂ ಇವೆ. ಲಗ್ನದಲ್ಲಿ ಗುರುವಿರುವುದರಿಂದ ಅದು ಶಕ್ತಿ. ಅಷ್ಟಮ ಸ್ಥಾನದಲ್ಲಿ ಕುಜ ಇರುವುದರಿಂದ ಇದು ಯುದ್ಧ ಸ್ಥಿತಿ. ಸ್ವತಃ ನರೇಂದ್ರ ಮೋದಿ ಅವರೇ ಬಲ ಪ್ರದರ್ಶನಕ್ಕೆ ಇಳಿಯತ್ತಾರೆ. ದೇಶದ ಒಳಗಿನ ಹಾಗೂ ಹೊರಗಿನ ಶತ್ರು ಪಡೆ ಮೇಲಿಂದ ಮೇಲೆ ಮುಗಿ ಬೀಳುತ್ತವೆ. ಹತಾಶರಾದ ವಿರೋಧಿಗಳಿಂದ ಪಿತೂರಿ ಮಾಡುತ್ತಾರೆ. ಶತ್ರು ದೇಶಗಳಿಂದ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿಗಳಾಗುವ ಸಾಧ್ಯತೆ ಹೆಚ್ಚಿದೆ. ಸ್ವತಃ ಪ್ರಧಾನಿಗಳ ಜಾತಕದಲ್ಲಿ ಆಯುಷ್ಯ ಸ್ಥಾನ ತುಂಬ ಬಲವಾಗಿದೆ. ಆ ಕಾರಣಕ್ಕೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.
ಈ ಐದು ವರ್ಷಗಳ ಅವಧಿಯಲ್ಲಿ ನಕಾರಾತ್ಮಕ ಪ್ರಚಾರಗಳನ್ನು ವಿರೋಧಿಗಳು ಕೈಗೊಳ್ಳುತ್ತಾರೆ. ನರೇಂದ್ರ ಮೋದಿಗೆ ಮಹಾ ಸಿಂಹಾಸನಾಧೀಶ್ವರ ಯೋಗದ ಫಲ ಇರುವುದರಿಂದ ಅವರಾಗಿಯೇ ಅಧಿಕಾರ ತ್ಯಜಿಸುವವರೆಗೆ ಯಾರಿಂದಲೂ ಪ್ರಧಾನಿ ಹುದ್ದೆ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇಳಿ ಸಂಜೆ ಜರಾಸಂಧನ ವಧೆಯಾದಂತೆ, ದುಷ್ಟ ಸಂಹಾರ ಆಗುತ್ತದೆ. ಇಂದು ಸಂಜೆ 6ಕ್ಕೆ ಪ್ರಮಾಣ ವಚನವಾದರೂ ಲಗ್ನ ವೃಶ್ವಿಕವೇ. ಲಗ್ನದ ಅಧಿಪತಿ ಕುಜನೇ ಅಷ್ಟಮದಲ್ಲಿ ಇರುತ್ತಾನೆ. ಬುಧನು ನಿಪುಣ ಯೋಗದಲ್ಲಿ ಇರುವುದರಿಂದ ಗುರು ವೀಕ್ಷಣೆಯಲ್ಲಿ ಇರುವುದರಿಂದ ಇದು ಶುಭವೂ ಆಗುತ್ತದೆ ಎನ್ನುತ್ತಾರೆ ಪ್ರಕಾಶ್ ಅಮ್ಮಣ್ಣಾಯ.