ಹಾಸನ: ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣಾ ಪ್ರಚಾರಕ್ಕೆ ಮನೆಯಿಂದ ಹೊರಡುವ ಮುನ್ನ ಮಂಗಳಮುಖಿಯರ ಆಶೀರ್ವಾದ ಪಡೆದಿದ್ದಾರೆ.
ಹೊಳೇನರಸೀಪುರ ಪಟ್ಟಣದಲ್ಲಿರುವ ಸಚಿವ ಹೆಚ್.ಡಿ.ರೇವಣ್ಣನವರ ಮನೆಯಲ್ಲಿ ಪ್ರಜ್ವಲ್ಗೆ ವಿಶೇಷವಾಗಿ ಮಂಗಳಮುಖಿಯರು ಆಶೀರ್ವಾದ ಮಾಡಿದ್ದಾರೆ. ಪ್ರಜ್ವಲ್ ಅವರಿಗೆ ಆರತಿ ಎತ್ತಿ, ದೃಷ್ಟಿ ತೆಗೆದು ತಮ್ಮ ಜೋಳಿಗೆಯಿಂದ ಒಂದು ರೂಪಾಯಿ ಮಂಗಳಮುಖಿಯರು ಕೊಟ್ಟು ಒಳ್ಳೆಯದಾಗಲಿ ಎಂದು ದೇವೇಗೌಡರ ಮೊಮ್ಮಗನಿಗೆ ಆಶೀರ್ವದಿಸಿದ್ದಾರೆ.
ಮಂಗಳಮುಖಿಯರು ಆಶೀರ್ವಾದ ಮಾಡಿದ್ದಕ್ಕೆ ಐನೂರು ರೂಪಾಯಿ ಕೊಟ್ಟು ಒಂದು ರೂಪಾಯಿಯನ್ನು ಪ್ರಜ್ವಲ್ ವಾಪಸ್ ಪಡೆದುಕೊಂಡರು. ಈ ವೇಳೆ ಪ್ರಜ್ವಲ್ ಅವರ ತಾಯಿ ಕೂಡ ಮಗನೊಂದಿಗೆ ಮಂಗಳಮುಖಿಯರ ಆಶೀರ್ವಾದ ಪಡೆದುಕೊಂಡರು.
ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುವ ಸಾಧ್ಯತೆಯಿದ್ದು, ಇಂದಿನಿಂದ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಜ್ವಲ್ ಅವರು, ನನಗೆ ಇನ್ನೂ ಹಾಸನದಿಂದ ಚುನಾವಣೆಗೆ ಸೀಟು ಖಚಿತವಾಗಿಲ್ಲ. ಆದ್ರೆ ಕಳೆದ 3 ತಿಂಗಳಿಂದ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನನಗೆ ಸೀಟು ಸಿಗದಿದ್ದರೂ ನಾನು ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv