ಬೆಂಗಳೂರು: ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ಚಂದ್ರ ನಟಿಯಾಗಿ ಹೊರಹೊಮ್ಮಲಿದ್ದಾರೆಂಬ ಸುದ್ದಿ ಹಳೆಯದು. ಅವರು ಪ್ರಜ್ವಲ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆಂಬ ಸುದ್ದಿ ಕೂಡಾ ಈ ಹಿಂದೆಯೇ ಜಾಹೀರಾಗಿತ್ತು. ಆದರೀಗ ರಾಗಿಣಿ ಏಕಾಏಕಿ ನಾಯಕಿಯಾಗಿ ಅಡಿಯಿರಿಸಲಿರೋ ಅಚ್ಚರಿಯ ಸುದ್ದಿ ಹೊರಬಿದ್ದಿದೆ!
ರಾಗಿಣಿ ವಿಜಯದಶಮಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ. ರಘು ಸಮರ್ಥ ನಿರ್ದೇಶನದ ಈ ಚಿತ್ರದಲ್ಲಿ ಅವರು ಲಾಯರ್ ಆಗಿಯೂ ನಟಿಸಲಿದ್ದಾರೆ. ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರಕ್ಕೆ ಇದೇ ತಿಂಗಳ 19ನೇ ತಾರೀಕಿನಂದು ಮುಹೂರ್ತ ಸಮಾರಂಭವೂ ನಡೆಯಲಿದೆ.
ರಾಗಿಣಿ ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸುವಂತೆ ಮಾಡಲು ಪ್ರಯತ್ನ ಚಾಲ್ತಿಯಲ್ಲಿತ್ತು. ಆದರೆ ಕಥೆಯೂ ಸೇರಿದಂತೆ ನಾನಾ ಅಡೆತಡೆಗಳಿಂದ ಅದೇಕೋ ಸಾಧ್ಯವಾಗಿರಲಿಲ್ಲ. ಇದರ ನಡುವೆಯೇ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಮುಖ್ಯ ಅತಿಥಿ ಪಾತ್ರಕ್ಕೆ ರಾಗಿಣಿ ಫಿಕ್ಸಾಗಿದ್ದರು. ಈ ಹೊತ್ತಿನಲ್ಲಿಯೇ ನಿರ್ದೇಶಕ ರಘು ಸಮರ್ಥ ಅವರು ವಿಜಯಲಕ್ಷ್ಮಿ ಚಿತ್ರದ ಕಥೆ ಹೇಳಿದಾಗ ರಾಗಿಣಿ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ಗೂ ಆ ಕಥೆ ಇಷ್ಟವಾಗಿದೆ.
ಈ ಮೂಲಕ ಡೈನಾಮಿಕ್ ಕುಟುಂಬದ ಸೊಸೆ ಕೂಡಾ ಥ್ರಿಲ್ಲರ್ ಚಿತ್ರದ ಮೂಲಕ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲಿರೋದು ಪಕ್ಕಾ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv