ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಿಂದ ಸ್ಪರ್ಧೆ ಮಾಡಿರುವ ಸಾಧ್ವಿ ಪ್ರಜ್ಞಾಸಿಂಗ್ ಇಂದು ಮಾಜಿ ಸಿಎಂ ಉಮಾಭಾರತಿ ಅವರನ್ನು ಭೇಟಿ ಮಾಡಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಈ ವೇಳೆ ಪ್ರಜ್ಞಾಸಿಂಗ್ ಉಮಾ ಭಾರತಿ ಅವರನ್ನು ಅಪ್ಪಿ ಕಣ್ಣೀರಿಟ್ಟಿದ್ದಾರೆ.
ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕಣಕ್ಕೆ ಇಳಿದಿರುವ ಪ್ರಜ್ಞಾಸಿಂಗ್, ಉಮಾ ಭಾರತಿ ಅವರನ್ನು ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಲು ಅವರ ನಿವಾಸದ ಬಳಿ ತೆರಳಿದ್ದರು. ಈ ಭೇಟಿ ಬಳಿಕ ಉಮಾ ಭಾರತಿ ಅವರು ಪ್ರಜ್ಞಾ ಅವರನ್ನು ಕಾರಿನವರೆಗೂ ಬಂದು ಕಳುಹಿಸಿಕೊಟ್ಟರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಪ್ರಜ್ಞಾಸಿಂಗ್ ಕಣ್ಣೀರಿಟ್ಟಿದ್ದಾರೆ.
ಇತ್ತೀಚಿನ ಸಂದರ್ಭದಲ್ಲಿ ಉಮಾ ಭಾರತಿ ಹಾಗೂ ಪ್ರಜ್ಞಾ ಮಧ್ಯೆ ವೈಮನಸ್ಸು ಮೂಡಿತ್ತು ಎಂದು ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಮಾಧ್ಯಮಗಳು ಉಮಾ ಭಾರತಿ ಅವರನ್ನು ಪ್ರಶ್ನೆ ಮಾಡಿದ ವೇಳೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಅವರು, ಪ್ರಜ್ಞಾ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ಅವರು ಮಹಾನ್ ಸ್ವಾಧಿ, ನಾನು ಸಾಮಾನ್ಯ ವ್ಯಕ್ತಿ. ಮೂರ್ಖ ಜೀವಿ ಎಂದು ಪ್ರತಿಕ್ರಿಯೆ ನೀಡಿದ್ದರು.
ಘಟನೆ ಬಳಿಕ ಮಾತನಾಡಿದ ಉಮಾ ಭಾರತಿ ಅವರು, ಇದು ಒಂದು ಭಾವನಾತ್ಮಕ ಸನ್ನಿವೇಶ ಅಷ್ಟೇ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಉಮಾ ಭಾರತಿ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತು ಚುನಾವಣೆಗೂ ಮುನ್ನವೇ ಕೇಳಿ ಬಂದಿತ್ತು.
#WATCH Madhya Pradesh: Pragya Singh Thakur, BJP’s LS candidate from Bhopal breaks down while meeting Union Minister and senior BJP leader Uma Bharti in Bhopal. pic.twitter.com/SqcvJPCfnZ
— ANI (@ANI) April 29, 2019