ನವದೆಹಲಿ: ಈಗಾಗಲೇ ಜಾರಿಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೇಗೆ ವಾರ್ಷಿಕವಾಗಿ 1.5 ರಿಂದ 1.6 ಲಕ್ಷ ಕೋಟಿ ಅನುದಾನ ಬೇಕಿದೆ. ಈ ಯೋಜನೆ ಪೂರ್ಣಗೊಳಿಸಲು ಹಲವು ದಶಕಗಳು ಬೇಕು. ಈ ಕಾರಣಕ್ಕೆ ಖಾಸಗಿಯವರ ಜೊತೆಗೂಡಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಮುಂದಾಗಿದ್ದೇವೆ ಎಂದು ಸೀತಾರಾಮನ್ ಹೇಳಿದ್ದಾರೆ.
ರೈಲ್ವೇ ಮೂಲಭೂತ ಸೌಕರ್ಯಕ್ಕಾಗಿ 2018-2030ರ ಅವಧಿಗೆ 50 ಲಕ್ಷ ಕೋಟಿಯ ಅವಶ್ಯಕತೆ ಇದೆ. ಅಭಿವೃದ್ಧಿ ಪಥದತ್ತ ಶರವೇಗದಿಂದ ಸಾಗುತ್ತಿರುವ ಭಾರತದಲ್ಲಿ ಪ್ರಯಾಣಿಕರ ಅನಕೂಲ ಮತ್ತು ಉತ್ತಮ ಸೇವೆಗಾಗಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಾರ್ಯ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಸರಕುಗಳನ್ನು ನದಿ ಮಾರ್ಗದ ಮೂಲಕ ಸಾಗಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇವಲ ರೈಲ್ವೇ ಮತ್ತು ರಸ್ತೆ ಮಾರ್ಗ ಬಳಸಿದ್ರೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಹಾಗಾಗಿ ಸರ್ಕಾರ ನದಿ ಮಾರ್ಗವನ್ನು ಚಿಂತಿಸಿದೆ ಎಂದರು.
ಉಪನಗರಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆ ಸರ್ಕಾರ ಮುಂದಿದೆ. ಸಂಪರ್ಕ ಕಲ್ಪಿಸಲು ಹೆಚ್ಚು ಬಂಡವಾಳದ ಅವಶ್ಯಕತೆ ಇದೆ. ರೈಲ್ವೇ ಇಲಾಖೆಯ ವಾರ್ಷಿಕ ಆದಾಯ 1.5 ರಿಂದ 1.6 ಲಕ್ಷ ಕೋಟಿ ರೂ. ಇದೆ. ಎಲ್ಲ ಉಪನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲು ಒಂದು ದಶಕವೇ ಬೇಕು. ಟ್ರ್ಯಾಕ್, ರೈಲ್ವೇ ಇಂಜಿನ್, ಕೋಚ್, ವ್ಯಾಗನ್ ನಿರ್ಮಾಣದ ಕೆಲಸವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ-ಖಾಸಗಿ ಸಹಭಾಗಿತ್ವದ ಪಿಪಿಪಿ ಮೂಲಕ ರೈಲ್ವೇ ಇಲಾಖೆಯಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು. ಬಂಡವಾಳ ಹೂಡಿಕೆ ಬಳಿಕ ರೈಲ್ವೇ ಟ್ರ್ಯಾಕ್, ಮೂಲಭೂತ ಸೌಲಭ್ಯ ನೀಡುವುದು. ಇವುಗಳ ಜೊತೆಯಲ್ಲಿ ಪ್ರಯಾಣಿಕರ ಸರಕು ಸಾಗಣೆ ((Passenger Freight Service) ಸೇವೆ ಆರಂಭಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಮೆಟ್ರೋ: 2019-20 ಬಜೆಟ್ ನಲ್ಲಿ ದೇಶದಲ್ಲಿ 657 ಕಿ.ಮೀ. ಮೆಟ್ರೋ ರೈಲ್ವೇ ನೆಟ್ವರ್ಕ್ ಚಾಲನೆ ಸಿಗಲಿದೆ. ಮೆಟ್ರೋ ರೈಲ್ವೇ ಹೆಚ್ಚಿನ ಕಾಮಗಾರಿ ಪಿಪಿಪಿ ಸಹಭಾಗಿತ್ವದಲ್ಲಿ ನಡೆಯಲಿದೆ.
ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ಪಿಯೂಶ್ ಗೋಯಲ್ 2019-20ರ ಆರ್ಥಿಕ ವರ್ಷದಲ್ಲಿ 64,587 ಕೋಟಿ ರೂ. ಅನುದಾನವನ್ನು ನೀಡಿದ್ದರು.