ಉಡುಪಿ: ಕಲ್ಲಿದ್ದಲಿನ(Coal) ಬೆಲೆಯ ಹೊಂದಾಣಿಕೆ ಮಾಡಲು ಕಾಂಗ್ರೆಸ್(Congress) ಸರ್ಕಾರ 2014ರಲ್ಲಿ ರೂಪಿಸಿದ್ದ ನಿಯಮಾವಳಿಗಳನ್ನು ತೆಗೆದುಹಾಕುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್(Sunil Kumar) ಹೇಳಿದ್ದಾರೆ.
ಬಿಗ್ ಬುಲೆಟಿನ್ ನಲ್ಲಿ ರಾಜ್ಯದ ವಿದ್ಯುತ್ ದರ(Power Tariff) ಏರಿಕೆ, ಜನಸಾಮಾನ್ಯರ ಮೇಲಿನ ಕರೆಂಟ್ ಬಿಲ್ ಬರೆ, ವಿದ್ಯುತ್ ಸೋರಿಕೆ, ಕಳ್ಳತನ ಬಗ್ಗೆ ಕ್ರಮ ಕೈಗೊಳ್ಳದವರ ವಿರುದ್ಧ ಚಾಟಿ ಬೀಸಲಾಗಿತ್ತು. ಮೂರು ತಿಂಗಳಿಗೆ ವಿದ್ಯುತ್ ದರ ಏರಿಕೆ, ಕಲ್ಲಿದ್ದಲು ಬೆಲೆಯಾಧಾರಿತ ವಿದ್ಯುತ್ ಬೆಲೆ ಪರಿಷ್ಕರಣೆ ಕುರಿತು ಪಬ್ಲಿಕ್ ಟಿವಿ ನಿರಂತರ ಸುದ್ದಿ ಮಾಡಿತ್ತು. ಇದರ ಫಲಶ್ರುತಿ ಎಂಬಂತೆ, ಈ ಬಗ್ಗೆ ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ಮಾಡುವುದಾಗಿ ಸಚಿವ ಸುನಿಲ್ ಕುಮಾರ್ ಉಡುಪಿಯಲ್ಲಿ ಭರವಸೆ ನೀಡಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಇಂದಿನಿಂದ ವಿದ್ಯುತ್ ದರ ಏರಿಕೆ
ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ ಬಾಧಕ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಅಗತ್ಯ ಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯುವುದಿಲ್ಲ. ಹಿಂದಿನ ನಿಯಮಾವಳಿಯೇ ಮುಂದುವರಿಯುತ್ತಿದೆ. ನಮ್ಮ ಸರ್ಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ಈ ನಿಯಮಾವಳಿ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ಮೂರು ತಿಂಗಳಿಗೊಮ್ಮೆ ದರ ಹೊಂದಾಣಿಕೆ ಮಾಡುವ ನಿಯಮದ ಬಗ್ಗೆ ಮರು ಚಿಂತನೆ ಮಾಡುತ್ತೇವೆ. ಗ್ರಾಹಕರಿಗೆ ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸಿದೆ ಎಂದು ಸಚಿವರು ಹೇಳಿದರು.