ಬೆಂಗಳೂರು: ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆ ಕಂಡಿರುವ ನಟಸಾರ್ವಭೌಮ ಚಿತ್ರಕ್ಕೆ ಅಭಿಮಾನಿಗಳು ಕೊಡುತ್ತಿರುವ ರೆಸ್ಪಾನ್ಸ್ ನೋಡಿ ಪವರ್ ಸ್ಟಾರ್ ಫುಲ್ ಖುಷ್ ಆಗಿದ್ದಾರೆ.
ಇಂದು ಬೆಳಗ್ಗೆ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದ ಪುನೀತ್ ರಾಜ್ಕುಮಾರ್ ಪ್ರೇಕ್ಷಕರ ಪ್ರೀತಿಗೆ ಮನಸೋತಿದ್ದಾರೆ. ಚಿತ್ರಮಂದಿರಗಳಲ್ಲಿ ಕಿಕ್ಕಿರಿದು ಸೇರಿ ನಟಸಾರ್ವಭೌಮ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿದ ಎಲ್ಲಾ ಅಭಿಮಾನಿಗಳಿಗೂ ಪುನೀತ್ ಧನ್ಯವಾದ ತಿಳಿಸಿದರು. ಅಲ್ಲದೆ ತ್ರಿವೇಣಿ ಚಿತ್ರಮಂದಿರದಲ್ಲಿ ಇದ್ದ ಅಭಿಮಾನಿಗಳತ್ತ ಕೈ ಬೀಸಿ ಪವರ್ ಸ್ಟಾರ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಚಿತ್ರಕ್ಕೆ ತುಂಬಾ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಅಭಿಮಾನಿಗಳಿಗೆ ನಾನು ಸದಾ ಚಿರಋಣಿ. ಅಭಿಮಾನಿಗಳಿಗಾಗಿಯೇ ನಾವು ಸಿನಿಮಾ ಮಾಡೋದು. ಅವರಿಗೆ ಸಂತೋಷವಾದ್ರೆ ನಾವು ಮಾಡಿರುವ ಕೆಲಸಕ್ಕೆ ಸಾರ್ಥಕತೆ ಸಿಗೋದು. ಇದು ಮೊದಲನೆಯ ದಿನ, ಮುಂದಿನ ದಿನಗಳಲ್ಲಿ ಯಾವ ರೀತಿ ರೆಸ್ಪಾನ್ಸ್ ಬರುತ್ತೋ ಅಂತ ಕಾಯ್ತಿದ್ದೀನಿ. ಅಭಿಮಾನಿಗಳೇ ನಮ್ಮ ವಿಮರ್ಶಕರು ಅವರು ಸಿನಿಮಾ ನೋಡಿ ಸಂತೋಷ ಪಟ್ಟರೆ ನಮಗೂ ಸಂತೋಷ ಎಂದು ಹೇಳಿದ್ದಾರೆ.
ಅಲ್ಲದೇ ಚಿತ್ರಮಂದಿರಗಳಲ್ಲಿ ಕಟೌಟ್ ನಿಲ್ಲಿಸಿ, ಪೂಜೆ ಮಾಡಿ ನಟಸಾರ್ವಭೌಮ ಚಿತ್ರವನ್ನು ಹಬ್ಬದ ರೀತಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ನಾನು ಹಾಗೂ ನಮ್ಮ ಕುಟುಂಬದವರು ಎಂದಿಗೂ ಚಿರಋಣಿ ಎಂದು ಅಭಿಮನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಈಗಾಗಲೇ ನಟಸಾರ್ವಭೌಮ ಸಿನಿಮಾವನ್ನು ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ತ್ರಿವೇಣಿ ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv