ಸಂಘಪರಿವಾರದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಿ: ಪಾಪ್ಯುಲರ್ ಫ್ರಂಟ್

Public TV
3 Min Read
POPULAR FRNT

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿ ತಿಂಗಳು ಕಳೆದರೂ, ಇದರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘ ಪರಿವಾರ ನಾಯಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಿ ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.

MNG TRIDENT

ಯುವಕರಿಗೆ ತ್ರಿಶೂಲ ವಿತರಣೆ ಮಾಡಿದ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದಾಗ ಮಂಗಳೂರು ಪೊಲೀಸ್ ಕಮಿಷನರ್ ಅವರು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಕಮಿಷನರ್ ಅವರು ಇದರ ಕುರಿತಾದ ಯಾವುದೇ ವಿಚಾರವನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

MNG TRIDENT 2

ಈ ಬಗ್ಗೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಪರಿವಾರದ ಕೋಮು ಪ್ರಚೋದನೆಯಿಂದಾಗಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಂಸಾಕೃತ್ಯಗಳು ನಡೆದಾಗ ತ್ರಿಶೂಲದ ವಿಚಾರವೂ ಚರ್ಚೆಗೆ ಬರುತ್ತಿದೆ. ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಮತ್ತು ಇತರ ನಾಯಕರ ಪ್ರಚೋದನೆಯ ಬಳಿಕ ಪುತ್ತೂರಿನ ಕೊಂಬೆಟ್ಟು ಕಾಲೇಜಿನಲ್ಲಿ ಎ.ಬಿ.ವಿ.ಪಿ ವಿದ್ಯಾರ್ಥಿಗಳು ಮುಸ್ಲಿಮ್ ವಿದ್ಯಾರ್ಥಿಗಳಿಗೆ ತ್ರಿಶೂಲದಿಂದ ಇರಿದಿರುವ ವಿಚಾರ ಕೇಳಿಬಂದಿದೆ. ಸಂಘಪರಿವಾರದ ಪ್ರಚೋದನೆಯಿಂದ ಕೊಂಬೆಟ್ಟು ಕಾಲೇಜಿನಲ್ಲಿ ಮುಸ್ಲಿಮ್ ಯುವಕರನ್ನು ಗುರಿಪಡಿಸಿಕೊಂಡು ನಿರಂತರ ದಾಳಿಗಳನ್ನು ನಡೆಸಲಾಗುತ್ತಿದ್ದು, ಇದು ವಾರದೊಳಗೆ ನಡೆದ ನಾಲ್ಕನೇ ದಾಳಿಯಾಗಿದೆ. ಅದೇ ರೀತಿ, ತ್ರಿಶೂಲ ದೀಕ್ಷೆಯನ್ನು ತಾವು ಸಾಂಕೇತಿಕವಾಗಿ ನಡೆಸಿದ್ದೇವೆ ಎಂದು ಸಂಘಪರಿವಾರದ ಮುಖಂಡರು ಹೇಳಿಕೆ ನೀಡಿದ್ದರಾದರೂ, ಆ ನಂತರದ ದಿನಗಳಲ್ಲಿ ಉಪ್ಪಿನಂಗಡಿಯ ವಳಾಲ್ ಸಮೀಪ ನಡೆದ ಅಪಘಾತದ ವೇಳೆ ದ್ವಿಚಕ್ರವಾಹನದ ಸೀಟಿನ ಹಿಂಬದಿ ತ್ರಿಶೂಲ ಇಟ್ಟಿರುವುದು ಬಹಿರಂಗವಾಗಿತ್ತು. ವಾಹನದಲ್ಲಿ ತ್ರಿಶೂಲವಿಟ್ಟು ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ಯುವಕರ ದುರುದ್ದೇಶದ ಬಗ್ಗೆ ತನಿಖೆಯಾಗಬೇಕಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಅಂತಹ ಬೆಳವಣಿಗೆ ಕಂಡು ಬರಲಿಲ್ಲ.  ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ

ಅನೈತಿಕ ಪೊಲೀಸ್ ಗಿರಿಯ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಸೆಕ್ಷನ್ ಹಾಕಿ ಜೈಲಿಗೆ ತಳ್ಳುವ ಬದಲು ಅವರಿಗೆ ದುರ್ಬಲ ಸೆಕ್ಷನ್ ಹಾಕಿ ಠಾಣೆಯಲ್ಲಿಯೇ ಜಾಮೀನು ದೊರಕುವಂತೆ ಮಾಡಲಾಯಿತು. ತ್ರಿಶೂಲ ದೀಕ್ಷೆಯ ಬಳಿಕ ಹಿಂಸಾಕೃತ್ಯಗಳಲ್ಲಿ ತ್ರಿಶೂಲ ಬಳಕೆಯ ವಿಚಾರವೂ ಕೇಳಿ ಬಂತು. ಇದೀಗ ಹಿಂದೂ ಜಾಗರಣ ವೇದಿಕೆಯ ಪ್ರಾಂತಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಸಾಂವಿಧಾನಿಕ ಹುದ್ದೆಯಲ್ಲಿರುವ ಜಿಲ್ಲಾಧಿಕಾರಿಯವರನ್ನು ಕೊರಳಪಟ್ಟಿ ಹಿಡಿದು ಥಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಆ ನಂತರ ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಪುಂಜಲ್ ಕಟ್ಟೆ ಸಬ್ ಇನ್ಸ್ ಪೆಕ್ಟರ್ ಕಾಲು ಮುರಿಯುತ್ತೇನೆಂದು ಬೆದರಿಯೊಡ್ಡಿದ. ಈ ರೀತಿ ಸರ್ಕಾರಿ ಅಧಿಕಾರಿಗಳ ಮೇಲೆ ಬೆದರಿಕೆಯೊಡ್ಡುವಾಗಲೂ, ಸಂಘಪರಿವಾರ ನಾಯಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟುವ ಪ್ರಕ್ರಿಯೆ ಕಂಡು ಬರುತ್ತಿಲ್ಲ. ಇಂತಹ ಬೆಳವಣಿಗೆಗಳು ಸಾರ್ವಜನಿಕರು ಕಾನೂನು ಸುವ್ಯಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಲಿದೆ. ಇದನ್ನೂ ಓದಿ: ಪೊಲೀಸರಿಗೆ ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ: ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಸಾಮಾಜಿಕ ಸಾಮರಸ್ಯಕ್ಕೆ ಮಾರಕವಾಗಿರುವ ತ್ರಿಶೂಲ ವಿತರಣೆಯ ವಿರುದ್ಧ ದೂರು ನೀಡಿದ್ದರೂ, ಇನ್ನೂ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡು ಸಂಘಪರಿವಾರದ ಕಾರ್ಯಕರ್ತರಿಗೆ ನಡೆಸಲಾಗಿರುವ ತ್ರಿಶೂಲ ವಿತರಣೆಯ ಹಿಂದಿನ ಪಿತೂರಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಗಲಭೆ ಹರಡುವ ನಿಟ್ಟಿನಲ್ಲಿ ಹಿಂಸಾಕೃತ್ಯಗಳಿಗೆ ಬಳಸಲಾಗುತ್ತಿರುವ ತ್ರಿಶೂಲಗಳನ್ನು ಪೊಲೀಸರು ಕೂಡಲೇ ವಶಪಡಿಸಿಕೊಳ್ಳಬೇಕು. ಒಂದು ವೇಳೆ ತ್ರಿಶೂಲ ದೀಕ್ಷೆ ಕಾನೂನುಬದ್ಧವಾಗಿದ್ದರೆ, ಆತ್ಮ ರಕ್ಷಣೆಗಾಗಿ ಅಂತಹ ಮಾರಕಾಸ್ತ್ರಗಳನ್ನು ಜೊತೆಗಿಟ್ಟುಕೊಳ್ಳಲು ಸಾರ್ವಜನಿಕರಿಗೂ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬೇಕೆಂದರು.

Share This Article