ಬೀದರ್: 2013ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರವನ್ನು ಸಿಂಗಾಪೂರ ಮಾಡುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದ ಶಾಸಕ ಅಶೋಕ್ ಖೇಣಿಯವರ ಮೊತ್ತೊಂದು ಕಳಪೆ ಕಾಮಗಾರಿಯ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬರುವ ನಿರ್ಣಾ ಗ್ರಾಮದಲ್ಲಿ ಕಳೆದ 40 ದಿನಗಳ ಹಿಂದೆ, 1 ಕೋಟಿ ರೂ. ಬಜೆಟ್ನಲ್ಲಿ ಮಾಡಿದ್ದ ಸಿಸಿ ರೋಡ್ ಇಂದು ಕಾಣದಂತೆ ಮಾಯವಾಗಿದೆ. ರಸ್ತೆಯಲ್ಲಿ ಹಾಕಿದ್ದ ಟಾರು ಕಿತ್ತುಹೋಗಿದ್ದು, ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ.
ನಿರ್ಣಾ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ಈ ರೀತಿ ಮಾಡಿದ್ದರಿಂದ ಗ್ರಾಮಸ್ಥರು ಖೇಣಿ ವಿರುದ್ಧ ಗರಂ ಆಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವಾಗಿರುವ ಖೇಣಿ ಸಾಹೇಬ್ರು ಅಭಿವೃದ್ಧಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ಷೇತ್ರದ ಸಿಸಿ ರೋಡ್ ಮಾಡೋಕೆ ಆಗುತ್ತಿಲ್ಲ. ಇನ್ನು ಕ್ಷೇತ್ರವನ್ನು ಸಿಂಗಾಪೂರ ಎಲ್ಲಿ ಮಾಡ್ತಾರೆ..? ಇಂಥಾ ಶಾಸಕರನ್ನು ನಮ್ಮ ಜೀವನದಲ್ಲಿ ಹಿಂದೆಯೂ ನೋಡಿಲ್ಲ, ಮುಂದೆನು ನೋಡಲ್ಲ..? ಖೇಣಿ ದಕ್ಷಿಣ ಕ್ಷೇತ್ರದಲ್ಲಿ ನಿಲ್ಲೋಕೆ ಅಸಮರ್ಥರು ಎಂದು ದಕ್ಷಿಣ ಕ್ಷೇತ್ರದ ಮತದಾರ ಪ್ರಭುಗಳು ಖೇಣಿಯವರ ಕಳಪೆ ಕಾಮಗಾರಿಗೆ ಗರಂ ಆಗಿದ್ದಾರೆ.