ಚಿಕ್ಕಬಳ್ಳಾಪುರ: ಕಾಯಿಲೆ ಹಾಗೂ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಿ ಅಂತ ಮುನೇಶ್ವರ ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತೆಯರನ್ನು ಬಲವಂತವಾಗಿ ಹಿಡಿದೆಳೆದು ತನ್ನ ಜೊತೆ ನೃತ್ಯ ಮಾಡುವಂತೆ ದೇವಸ್ಥಾನದ ಕಳ್ಳ ಪೂಜಾರಿಯೊಬ್ಬ ಒತ್ತಾಯ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಶಿಡ್ಲಘಟ್ಟ ತಾಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದ ಪೂಜಾರಿ ಅಶ್ವತ್ಥ್ ಎಂಬಾತ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ.
ಮಹಿಳೆಯ ಸೀರೆ ಕೂದಲು ಮೈ ಕೈ ಎಳೆದಾಡಿ ದೇವರ ಮುಂದೆಯೇ ಅಸಭ್ಯವಾಗಿ ನೃತ್ಯ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಳ್ಳ ಪೂಜಾರಿಗೆ ಮಂಗಳಾರತಿ ಮಾಡುತ್ತಿದ್ದಾರೆ. ಸಮಸ್ಯೆಗಳ ನಿವಾರಣೆಗೆ ದೇವಸ್ಥಾನಕ್ಕೆ ಬರುವ ಮಹಿಳೆಯರು ಅನಿವಾರ್ಯವಾಗಿ ಈತನ ವಿಕೃತ ಮನಸ್ಸಿಗೆ ಸಾಥ್ ಕೊಡುವಂತಾಗಿದೆ.
ಇನ್ನೂ ತನ್ನ ಮೈಮೇಲೆ ದೇವರು ಬರುತ್ತೆ ತಾನು ಹೇಳಿದಂತೆ ಕೇಳಬೇಕು ಅಂತ ಮಹಿಳೆಯರನ್ನು ನಂಬಿಸುತ್ತಿದ್ದು, ಬಂದಿರುವ ಕಾಯಿಲೆ ವಾಸಿಯಾಗಬೇಕು ಅಂದರೆ ರಾತ್ರಿ ಇಡೀ ದೇವಸ್ಥಾನದಲ್ಲಿ ಮಲಗಬೇಕು ಅಂತ ಸುಳ್ಳು ಹೇಳುತ್ತಿದ್ದಾನೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.