ಕಾರವಾರ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲುವು ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಂಭ್ರಮಾಚರಣೆ ಮಾಡದೇ ಬಿಜೆಪಿ ಕಾರ್ಯಕರ್ತರು ಹೊನ್ನಾವರದಲ್ಲಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾ ಹೆಸರಿನಲ್ಲಿ ಪೂಜೆ ಮಾಡಿದ್ದಾರೆ.
ಇಂದು ಕಾರವಾರದ ಸುಭಾಷ್ ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿ ಮನೋಜ್ ಭಟ್ ಮಾಧ್ಯಮಗಳ ಜೊತೆ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗಲಭೆಗಳಾಗಿದ್ದು, ಈ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹಾಗೂ ಅಮಾಯಕ ಜನರನ್ನು ಬಂಧಿಸಲಾಗುತ್ತಿದೆ. ಈ ಕಾರಣದಿಂದ ನಾವು ವಿಜಯೋತ್ಸವ ಆಚರಿಸುವುದಿಲ್ಲ, ಬದಲಾಗಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಈ ಮೂಲಕ ಎಲ್ಲ ವಿಘ್ನಗಳು ನಿವಾರಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ ಎಂದು ಕಾರವಾರದ ಬಿಜೆಪಿ ಅಧ್ಯಕ್ಷ ಮನೋಜ್ ಭಟ್ ತಿಳಿಸಿದ್ದಾರೆ.
ಪರೇಶ್ ಮೇಸ್ತಾ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದರು. ಆದರೆ ಮರೇಶ್ ಮೇಸ್ತಾ ತಂದೆ ವೈದ್ಯರು ಸುಳ್ಳು ವರದಿ ನೀಡಿದ್ದಾರೆ. ಮಗನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು. ಭಾರೀ ಪ್ರತಿಭಟನೆಗಳು ನಡೆದ ಬಳಿಕ ಸರ್ಕಾರ ಈ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ವಹಿಸಿದೆ.