ರಾಯಚೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿರುವ ನಟಿ ಪೂಜಾ ಗಾಂಧಿ ತಮಗೆ ನ್ಯಾಯ ಸಿಕ್ಕರೆ ತಾನು ನಿಂತ ಕ್ಷೇತ್ರ ರಾಯಚೂರು ನಗರಕ್ಕೆ 101 ತೆಂಗಿನಕಾಯಿ ಒಡೆಯುವುದಾಗಿ ಹೇಳಿದ್ದಾರೆ.
ವಿಚಾರಣೆ ಹಿನ್ನೆಲೆ ರಾಯಚೂರಿನ ಜೆಎಂಎಫ್ ಸಿ ಎರಡನೇ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬಂದ ಬಳಿಕ ಮಾತನಾಡಿದ ಅವರು, ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ನಟ ಉಪೇಂದ್ರ ಹೊಸ ಪಕ್ಷ ಕಟ್ಟಿರುವುದಕ್ಕೆ ಶುಭ ಕೋರಿದ ನಟಿ, ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಲಾಗಿದ್ದು, ಅಂದೇ ಅಂತಿಮ ತೀರ್ಪು ಹೊರಬರಲಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಅನುಮತಿ ಪಡೆಯದೇ ಪ್ರಚಾರಕ್ಕೆ ವಾಹನ ಬಳಸಿದ್ದ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಡಿಸೆಂಬರ್ 4ಕ್ಕೆ ಅಂತಿಮ ತೀರ್ಪು ಹೊರಬೀಳಲಿದೆ.