ಬೆಂಗಳೂರು: ಇಂದು ರಾಜ್ಯಾದ್ಯಂತ 6 ಪದವೀಧರರು ಹಾಗು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆವರೆಗೂ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿದೆ.
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಮಾತ್ರ ಮತ ಚಲಾಯಿಸಬಹುದಾಗಿದೆ. 8 ಮತದಾನ ಮಾಡುವ ಪ್ರತಿಯೊಬ್ಬ ಮತದಾರರಿಗೂ ರಜೆ ನೀಡುವಂತೆ ಈಗಾಗಲೇ ಆದೇಶ ನೀಡಲಾಗಿದೆ.
ಯಾವ ಯಾವ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ:
1 ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ
2 ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ
3 ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ
4 ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ
5 ಬೆಂಗಳೂರು ಪದವೀಧರರ ಕ್ಷೇತ್ರ
6 ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ
ಮತದಾನ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗು ನಡೆಯಲಿದೆ. ಗುರುತಿನ ಚೀಟಿ ಇಲ್ಲದವರು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ವಿತರಿಸಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿದೆ.
ಮತ ಚಲಾಯಿಸಲು ಚುನಾವಣಾ ಕೇಂದ್ರದಿಂದಲೇ ಸರಬರಾಜು ಆಗಿರುವ ವೈಲೆಟ್ ಸ್ಕೆಚ್ ಪೆನ್ ನಿಂದ ಮಾತ್ರ ಮತ ಚಲಾಯಿಸಬಹುದಾಗಿದ್ದು, ಬೇರೆ ಯಾವುದೇ ಪೆನ್ ಉಪಯೋಗಿಸಿದ್ರೆ ಅದು ಕುಲಗೆಟ್ಟ ಮತವಾಗುತ್ತೆ ಅಂತ ಚುನಾವಣಾ ಆಯೋಗ ತಿಳಿಸಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಅತಿಹೆಚ್ಚು ಅಂದ್ರೆ 65254 ಮತದಾರರಿದ್ದು, 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆ ಜೂನ್ 12ರಂದು ನಡೆಯಲಿದೆ.