ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ (BJP- JDS) ಮೈತ್ರಿಯಿಂದ ಜೆಡಿಎಸ್ನಲ್ಲಿ ಭಾರೀ ಭಿನ್ನಮತ ಸ್ಫೋಟವಾಗಿದ್ದು, ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪಕ್ಷದ ಮುಖಂಡರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಮೈತ್ರಿಗೆ ಕೆಲ ಶಾಸಕರು ಹಾಗೂ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಸಮಾಧಾನ ಹೊರಹಾಕಿದ ಮುಖಂಡರ ಮನವೊಲಿಕೆಗೆ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಸಿಡಿದೆದ್ದ ನಾಯಕರ ಭೇಟಿ ಮಾಡಿ ಮಾತುಕತೆಗೆ ಮುಂದಾಗಿದ್ದಾರೆ. ಈಗಾಗಲೇ ಶಾಸಕ ಶರಣುಗೌಡ ಕಂದಕೂರು ಜೊತೆ ನಿಖಿಲ್ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ತಯಾರಿ – ಸಿಎಂ ಪುತ್ರ ಯತೀಂದ್ರಗೆ ಸಿಗುತ್ತಾ ಟಿಕೆಟ್?
ಜೆಡಿಎಸ್ ಮುಖಂಡರು ಕಳೆದ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದೆವು ಈಗ ಅವರ ಜೊತೆ ಹೊಂದಾಣಿಕೆ ಹೇಗೆ ಸಾಧ್ಯ? ಕ್ಷೇತ್ರದಲ್ಲಿ ಹೊಂದಾಣಿಕೆ ಆದರೆ ನಮ್ಮ ಕಾರ್ಯಕರ್ತರ ಕಥೆ ಏನು? ಬಿಜೆಪಿ ಅವಧಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಈಗ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಹೇಗೆ ಎಂಬ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕುಮಾರಸ್ವಾಮಿ ಮೈತ್ರಿ ಶಾಶ್ವತ ಎಂದು ಹೇಳಿದ್ದಾರೆ. ಹಾಗಾದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರಗಳ ಟಿಕೆಟ್ ಯಾರಿಗೆ ಸಿಗಲಿದೆ. ಮೈತ್ರಿಯಿಂದ ಸ್ಥಳೀಯ ಕಾರ್ಯಕರ್ತರ ಸ್ಥಾನಮಾನಗಳಿಗೆ ಹೇಗೆ ವ್ಯವಸ್ಥೆ ಮಾಡುತ್ತೀರಿ ಎನ್ನುವ ವಿಚಾರದ ಬಗ್ಗೆ ಕೆಲವು ಜೆಡಿಎಸ್ ಮುಖಂಡರು ಪ್ರಶ್ನೆ ಎತ್ತಿದ್ದಾರೆ. ಈ ಎಲ್ಲಾ ಗೊಂದಲಗಳನ್ನು ನಿಖಿಲ್ ಬಗೆಹರಿಸಿ ಪಕ್ಷದ ಮುಖಂಡರ ಮನವೊಲಿಸಲು ಮುಂದಾಗಿದ್ದಾರೆ.
ಪಕ್ಷದ ಅಸ್ಥಿತ್ವಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಮೈತ್ರಿ ಆದರೂ ನಮ್ಮ ಸಿದ್ಧಾಂತಗಳಲ್ಲಿ ರಾಜೀ ಆಗುವುದಿಲ್ಲ. ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗೆ ಧಕ್ಕೆ ಆಗದಂತೆ ಮೈತ್ರಿಯನ್ನು ಪಾಲಿಸಲಾಗುತ್ತದೆ. ಕಾಂಗ್ರೆಸ್ನ್ನು ಎದುರಿಸಬೇಕಾದರೆ ಮೈತ್ರಿ ಅನಿವಾರ್ಯವಾಗಿದೆ. ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ಚುನಾವಣೆಗಳ ಬಗ್ಗೆ ನಿರ್ಧಾರ ಆಗಿಲ್ಲ, ಈ ಬಗ್ಗೆ ಆತಂಕಬೇಡ. ನಮ್ಮ ಕಾರ್ಯಕರ್ತರಿಗೆ ಅಪಮಾನ ಆಗದಂತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರಿಗೆ ಮನವೊಲಿಸಲು ನಿಖಿಲ್ ಮುಂದಾಗಿದ್ದಾರೆ.
ಇದರ ನಡುವೆಯೇ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಹ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೋಮುವಾದಿ ಪಕ್ಷದ ಜೊತೆ ಮೈತ್ರಿ ಎಂದು ಅವರು ಅಸಮಾಧಾನಗೊಂಡಿದ್ದಾರೆ. ಅವರು ಪಕ್ಷ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅ.16ರಂದು ನಿರ್ಧಾರ ಪ್ರಕಟಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಸೆ.10ರಂದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ದೇವೇಗೌಡರ ತೀರ್ಮಾನಕ್ಕೆ ನಾವು ಬದ್ಧ ಎಂದಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಬಿಜೆಪಿ ಕಾರಣವಾಗಿದೆ. ನಮ್ಮ ಸೋಲಿಗೆ ಕಾರಣರಾದವರೊಂದಿಗೆ ಹೊಂದಾಣಿಕೆ ಸರಿಯಿಲ್ಲ. ಅಲ್ಲದೇ ಬಿಜೆಪಿ ಕೋಮುವಾದಿ ಪಕ್ಷ, ಅಂತಹ ಪಕ್ಷದ ಜೊತೆ ಮೈತ್ರಿ ಬೇಡ. ಬಿಜೆಪಿ ಜೊತೆ ಹೋದರೆ ಮುಸ್ಲಿಮರು ಪಕ್ಷದಿಂದ ಹೊರಗೆ ಹೋಗುತ್ತಾರೆ. ಸೈದ್ಧಾಂತಿಕ ವಿರೋಧದ ನಡುವೆ ಮೈತ್ರಿಯಾಗಿ ಜೆಡಿಎಸ್ ಬಲಿಯಾಗುವುದು ಬೇಡ. ಇದು ಜಾತ್ಯಾತೀತ ನಿಲುವಿಗೆ ಪೆಟ್ಟು ಎಂದು ಅವರು ಆತಂಕ ಹೊರ ಹಾಕಿದ್ದರು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]