ನವದೆಹಲಿ: ನೂತನ ಸಂಸತ್ ಭವನದ (New Parliament Building) ಪ್ರಾರಂಭೋತ್ಸವದ ವಿಚಾರವಾಗಿ ಆಡಳಿತ ಮತ್ತ ವಿಪಕ್ಷಗಳ ಮಧ್ಯೆ ರಾಜಕೀಯ ಸಂಘರ್ಷ ಜೋರಾಗಿದೆ.
ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ರಾಜಕೀಯ ಪಕ್ಷಗಳ ಸಂಖ್ಯೆ ಈಗ 21 ಆಗಿದೆ. ವಿಪಕ್ಷಗಳ ಈ ಬಹಿಷ್ಕಾರ ತಂತ್ರಕ್ಕೆ NDA ಮೈತ್ರಿಕೂಟದ ಪಕ್ಷಗಳು ಸೆಡ್ಡು ಹೊಡೆದಿವೆ. ಸಂವಿಧಾನದ ಮೌಲ್ಯಗಳಿಗೆ ವಿರೋಧ ಪಕ್ಷಗಳು ತಿಲಾಂಜಲಿ ಹಾಡಿವೆ ಎಂದು ಆಕ್ರೋಶ ಹೊರಹಾಕಿವೆ. ಇದನ್ನೂ ಓದಿ: ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಪಕ್ಷಗಳ ಬಹಿಷ್ಕಾರ – ಭಾಗವಹಿಸುತ್ತೇವೆ ಎಂದ 2 ಪಕ್ಷಗಳು
ಎನ್ಡಿಎಯೇತರ ಪಕ್ಷಗಳಾದ ಜೆಡಿಎಸ್, ಬಿಎಸ್ಪಿ, ಶಿರೋಮಣಿ ಅಕಾಲಿದಳ, ಬಿಜೆಡಿ, ವೈಎಸ್ಆರ್ಸಿಪಿ, ಟಿಡಿಪಿ ಪಕ್ಷಗಳು ಸಂಸತ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿವೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಕೂಡ ದೆಹಲಿಗೆ ತೆರಳಲಿದ್ದಾರೆ. ಇನ್ನೂ ವಿಪಕ್ಷಗಳ ಬಹಿಷ್ಕಾರ ನಡೆಗೆ ಪ್ರಧಾನಿ ಮೋದಿ (Narendra Modi) ಕೌಂಟರ್ ನೀಡಿದ್ದಾರೆ. ಇದನ್ನೂ ಓದಿ: ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ: ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
ಭಾರತದ ವಿಪಕ್ಷಗಳನ್ನು ಆಸ್ಟ್ರೇಲಿಯಾದ ವಿಪಕ್ಷಗಳ ಜೊತೆ ಹೋಲಿಸಿ ತಿರುಗೇಟು ನೀಡಿದ್ದಾರೆ. 6 ದಿನಗಳ ಪ್ರವಾಸ ಮುಗಿಸಿ ಇಂದು ಭಾರತಕ್ಕೆ ಮರಳಿದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಆಡಳಿತ ಮತ್ತು ವಿರೋಧ ಪಕ್ಷಗಳೆಲ್ಲಾ ತಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡುತ್ತವೆ ಎಂದಿದ್ದಾರೆ. ಮೊನ್ನೆ ಬ್ರಿಸ್ಬೆನ್ನಲ್ಲಿ ಅನಿವಾಸಿ ಭಾರತೀಯರ ಸಭೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಒಂದು ಕಮ್ಯುನಿಟಿ ಇವೆಂಟ್ನಲ್ಲಿ ಆಡಳಿತ ಮತ್ತು ವಿಪಕ್ಷಗಳೆಲ್ಲಾ ಒಟ್ಟಾಗಿ ಪಾಲ್ಗೊಂಡಿದ್ವು. ಈ ಮೂಲಕ ಪ್ರಜಾಪ್ರಭುತ್ವದ ಸ್ಪೂರ್ತಿಯನ್ನು ಪ್ರದರ್ಶಿಸಿದ್ರು ಎಂದು ಹೇಳಿಕೊಂಡರು. ಈ ಮೂಲಕ ಪರೋಕ್ಷವಾಗಿ, ಇಲ್ಲಿನ ವಿಪಕ್ಷಗಳ ನಡೆ ಸರಿಯಿಲ್ಲ ಅಂತ ಟೀಕಿಸಿದ್ರು.
ಇನ್ನು, ಈ ಪ್ರಕರಣವೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೋದಿ ಕೈಯಲ್ಲಿ ಉದ್ಘಾಟನೆ ಆಗೋದನ್ನು ತಡೀಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ನೂತನ ಸಂಸತ್ ಭವನದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ. ಸಮಾರಂಭದಲ್ಲಿ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಭಾಷಣವನ್ನು ಓದಲಾಗುತ್ತದೆ. ಸಂಜೆ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನಮಂತ್ರಿಗಳು ಭಾಷಣ ಮಾಡಲಿದ್ದಾರೆ.