ಗದಗ: ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಅನೇಕ ನೆರೆ ಸಂತ್ರಸ್ತರಿಗೆ ಇನ್ನೂ ಮೊದಲ ಹಂತದ ಪರಿಹಾರ ಸಿಕ್ಕಿಲ್ಲ.
ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡ ಸಾವಿರಾರು ಜನರು ಬೀದಿಗೆ ಬಿದ್ದಿದ್ದಾರೆ. ನೆರೆ ಬಂದು ಹೋಗಿ ಒಂದುವರೆ ತಿಂಗಳಾದ್ರೂ ನೆರೆ ಸಂತ್ರಸ್ತರ ಕಣ್ಣೀರು ಮಾತ್ರ ನಿಲ್ಲುತ್ತಿಲ್ಲ. ಕಾರಣ ಇನ್ನು ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ಕೂಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಸಂತ್ರಸ್ತರ ಜೊತೆಗಿದ್ದೇವೆ ಎನ್ನುವ ಜನಪ್ರತಿನಿಧಿಗಳಿಗೆ ಸಂತ್ರಸ್ತರು ಕಣ್ಣೀರಿನ ಮೂಲಕ ಹಿಡಿಶಾಪ ಹಾಕುತ್ತಿದ್ದಾರೆ.
ಕ್ಷೇತ್ರದ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರು ಕ್ಯಾರೆ ಎನ್ನುತ್ತಿಲ್ಲ. ನೊಂದ ಜನರ ಕಷ್ಟ ಆಲಿಸಲ್ಲ ಎನ್ನುವುದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಿದ್ದ ಮನೆಗಳ ಪರಿಹಾರ ನೀಡುವಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಲವರ ಸಂಪೂರ್ಣ ಮನೆ ಬಿದರೂ “ಬಿ”-“ಸಿ” ಗ್ರೇಡ್ ಹಾಕಿದ್ದಾರೆ. ಅಲ್ಪ ಸ್ವಲ್ಪ ಬಿದ್ದ ಮನೆಗಳಿಗೆ “ಎ” ಎಂದು ನಮೊದನೆ ಮಾಡಿದ್ದಾರೆ. ಮನೆಗಳ ಪರಿಹಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ವಾಸನ ಗ್ರಾಮದಲ್ಲಿ 480 ಮನೆಗಳಿದ್ದು, 2500ಕ್ಕೂ ಅಧಿಕ ಜನಸಂಖ್ಯೆಯಿದೆ. 180 ಜನರಿಗೆ 10 ಸಾವಿರ ರೂ. ಪರಿಹಾರ ಚೆಕ್ ಬಂದಿಲ್ಲ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಎಲ್ಲವೂ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತೆ. ಸಿ.ಎಂ ಯಡಿಯೂರಪ್ಪ ಮಾತ್ರ ಎಲ್ಲರಿಗೂ ಮೊದಲ ಹಂತದ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ನೂರಾರು ಜನರಿಗೆ ಚೆಕ್ ನೀಡದಕ್ಕೆ ಕಣ್ಣಿರಿಡುತ್ತಿದ್ದಾರೆ.