ಮಂಡ್ಯ: ನಾಡು, ನುಡಿಗಾಗಿ ರಾಜಕಾರಣಿಗಳು ಏನನ್ನೂ ಮಾಡಿಲ್ಲ. ಹೀಗಾಗಿ ಇನ್ಮುಂದೆ ಕನ್ನಡ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ (T.A.Narayana Gowda) ಹೇಳಿದ್ದಾರೆ.
ಕೆ.ಆರ್. ಪೇಟೆಯಲ್ಲಿ (K.R. Pet) ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಲಿಬಾಬ ಎಂದಿದ್ದಕ್ಕೆ ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡ (K.C.Narayana Gowda) ಹಾಗೂ ಜೆಡಿಎಸ್ ಮುಖಂಡ ಸಂತೋಷ್ ನಡುವೆ ವೇದಿಕೆಯಲ್ಲೇ ಜಗಳವಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾತನಾಡಿದ ಕರವೇ ಅಧ್ಯಕ್ಷ, ಇನ್ಮೇಲೆ ಯಾವ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಗಳಿಗೆ ಕರೆಯಲ್ಲ. ನಾನು ನಮ್ಮ ಕಾರ್ಯಕರ್ತರಿಗೆ ರಾಜಕಾರಣಿಗಳನ್ನ ದೂರವಿಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಲಿಬಾಬಗೆ ಹೋಲಿಕೆ ವಿಚಾರಕ್ಕೆ ವೇದಿಕೆಯಲ್ಲೇ ಜೆಡಿಎಸ್ ಮುಖಂಡ, ಬಿಜೆಪಿ ಸಚಿವರ ಮಧ್ಯೆ ಫೈಟ್
ಕೆ.ಆರ್. ಪೇಟೆಯಲ್ಲಿ ಕನ್ನಡ ವೇದಿಕೆಯನ್ನ ರಾಜಕಾರಣಕ್ಕೆ ಬಳಸಿಕೊಳ್ಳಲು ಬಂದರು. ಕಾರ್ಯಕ್ರಮವನ್ನ ರಾಜಕಾರಣದಿಂದ ಹಾಳುಮಾಡಲು ನೋಡಿದರು. ಕೆ.ಆರ್. ಪೇಟೆಯಲ್ಲಿ ನಡೆಯುತ್ತಿದ್ದದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಅದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಜೆಡಿಎಸ್ ಮುಖಂಡ ಸಂತೋಷ್ ರಾಜಕೀಯ ಮಾತಾಡಲು ಶುರು ಮಾಡಿದ. ಕರವೇ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕ ಪರ ಮಾತನಾಡಿಲ್ಲ. ಅದನ್ನ ಬಿಟ್ಟು ರಾಜಕಾರಣ ಮಾಡಲು ಶುರು ಮಾಡಿದ್ರು. ನಂತರ ನಾನು ಮೈಕ್ ತೆಗೊಂಡು ಸಚಿವ ನಾರಾಯಣಗೌಡ ಹಾಗೂ ಸಂತೋಷ್ ಇಬ್ಬರನ್ನೂ ಸುಮ್ಮನಾಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವೇದಿಕೆಯಲ್ಲಿ ಹೊಡೆದಾಟಗಳು ಆಗುತ್ತಿದ್ವು. ಅದನ್ನ ನಾನು ತಡೆದೆ. ನೀವು ರಾಜಕೀಯ ಮಾಡಬೇಕಿದ್ರೆ ನಿಮ್ಮ ವೇದಿಕೆಗಳಲ್ಲಿ ಮಾಡಿ. ನಾಡು, ನುಡಿಗೆ ಎಲ್ಲಾ ರಾಜಕೀಯ ಪಕ್ಷಗಳ ಸಾಧನೆ ಶೂನ್ಯ. ಅವರ ವೇದಿಕೆಗಳಲ್ಲಿ ರಾಜಕಾರಣ ಮಾಡಿಕೊಳ್ಳಲಿ. ಕನ್ನಡದ ಕಾರ್ಯಕ್ರಮದಲ್ಲಿ ರಾಜಕಾರಣ ಮಾಡಬಾರದು ಅನ್ನೋ ತಿಳುವಳಿಕೆ ಸಚಿವರಿಗೆ ಇರಬೇಕಿತ್ತು. ಕನ್ನಡವನ್ನ ಮರೆತು ರಾಜಕೀಯ ಕೆಸರೆರೆಚಾಟ ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು