-ಮೂರು ಬಾರಿ ಸಂಸದ, ಕೇಂದ್ರ, ರಾಜ್ಯದಲ್ಲಿ ಸಚಿವ ಸ್ಥಾನ..!
ಬೆಂಗಳೂರು: ಮೂರು ಬಾರಿ ಸಂಸದರು, ಕೇಂದ್ರ, ರಾಜ್ಯದಲ್ಲಿ ಸಚಿವರಾಗಿದ್ದ ಅಂಬರೀಶ್ ಸಚಿವ ಸ್ಥಾನಕ್ಕಾಗಿ ಯಾವತ್ತೂ ಹಾತೊರೆದವರಲ್ಲ. ಸಿಕ್ಕರೆ ಸಂತೋಷ, ಇಲ್ಲಾಂದ್ರು ಪರವಾಗಿಲ್ಲ ಅಂತಿದ್ದ ಅಂಬರೀಶ್ ರಾಜಕೀಯವಾಗಿ ತಮ್ಮದೇ ಗತ್ತು ಗೈರತ್ತು ಕಾಪಾಡಿಕೊಂಡವರು. ಕಾವೇರಿ ವಿಷಯವಾಗಿ ರೈತರ ಹಿತವೇ ಮುಖ್ಯ ಅಂತ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಂದವರು. ಪಕ್ಷಾತೀತವಾಗಿ ಇವತ್ತು ಎಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕಂದಿನಿಂದಲೂ ರಾಜ್ ಕುಮಾರ್, ವಿಷ್ಣುವರ್ಧನ್ ಜತೆ ಬೆಳೆದವರು, ಕಾವೇರಿ ವಿವಾದ ಸಂದರ್ಭದಲ್ಲಿ ರಾಜಕೀಯಕ್ಕೆ ಕಟ್ಟು ಬೀಳದೇ ಹೋರಾಟ ಮಾಡಿದವರು ಅಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಣ್ಣಿಸಿದರು. ರಾಜಕೀಯದಲ್ಲಿ ಒಬ್ಬ ಸಹೋದರನನ್ನು ಕಳೆದುಕೊಂಡಿದ್ದೇವೆ. ಅಭಿಮಾನಿಗಳು, ಸಾರ್ವಜನಿಕರು ಶಾಂತ ರೀತಿ ವರ್ತಿಸಿ ಅಂತ ಡಿಸಿಎಂ ಪರಮೇಶ್ವರ್ ಮನವಿ ಮಾಡಿಕೊಂಡರು.
ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹೋದ್ಯೋಗಿಯ ಅಂತಿಮ ದರ್ಶನ ಪಡೆದು, ಅಂಬಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಂಬರೀಶ್ ಸ್ನೇಹಜೀವಿ. ಅವರಿಗಿದ್ದಷ್ಟು ಸ್ನೇಹಿತರು ಮತ್ಯಾರಿಗೂ ಇರಲಿಲ್ಲ. ಅವರು ಅಜಾತಶತ್ರು. ಕನ್ನಡ ಚಿತ್ರರಂಗ ಕಂಡ ಮೇರುನಟ, ದಿಗ್ಗಜ, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗದ ಟ್ರಬಲ್ ಶೂಟರ್ ಅಂತ ರಾಜಕೀಯ ನಾಯಕರು ಬಣ್ಣಿಸಿದರು.
ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ಬಿಸಾಕಿ ಬಂದಾತ. ಸತ್ಯಾಗ್ರಹ ಕೂತ ಸಂದರ್ಭದಲ್ಲಿ ತಾವು ಸತ್ಯಾಗ್ರಹ ಕೂರಬೇಡಿ ಬನ್ನಿ ಅಂತಾ ಹೇಳಿದ ಮೇರು ವ್ಯಕ್ತಿತ್ವದವರು ಅಂತ ಯಡಿಯೂರಪ್ಪ ನೆನಸಿಕೊಂಡರು. ನಾನು ಅಂಬರೀಶ್ ಜೊತೆ ಓದಿದವನು. ಅವರ ಅಗಲಿಕೆಯ ನೋವು ಕಾಡ್ತಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಭಾವುಕರಾದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv