ಬೆಂಗಳೂರು: ಉಪ ಚುನಾವಣಾ ಕಣದಲ್ಲಿ ದೋಸ್ತಿಗಳ ನಡುವೆಯೇ ಪ್ರತಿಷ್ಠೆಯ ಕದನ ಶುರುವಾಯ್ತಾ ಅನ್ನೋ ಅನುಮಾನವೊಂದು ಮೂಡುತ್ತಿದೆ.
ಹೌದು. ಉಪ ಚುನಾವಣೆಗೆ ಮೊದಲೇ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಬಿಗ್ ಫೈಟ್ ಆರಂಭವಾಗಿದೆ. ಮಾಜಿ ಸಿಎಂಗಳಿಬ್ಬರು ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಉಪ ಚುನಾವಣೆ ಗೆಲುವಿಗಾಗಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದ ಕಾಂಗ್ರೆಸ್, ಕೆಲವು ಕ್ಷೇತ್ರಗಳಲ್ಲಿ ಕಳೆದ ಬಾರಿಯ ಜೆಡಿಎಸ್ ಅಭ್ಯರ್ಥಿಗಳ ಹೈಜಾಕ್ ಮಾಡಲು ಮುಂದಾಗಿದೆ. ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಜೆಡಿಎಸ್ ಸಹ ಅಗತ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಆಪರೇಷನ್ ಮಾಡಲು ಮುಂದಾಗಿದೆ. ಆ ಮೂಲಕ ಕಾಂಗ್ರೆಸ್ ಪಾಳಯದ ನೇತೃತ್ವ ವಹಿಸಿರುವ ಸಿದ್ದರಾಮಯ್ಯಗೆ ಟಕ್ಕರ್ ನೀಡಲು ಮುಂದಾಗಿದ್ದಾರೆ.
ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮಿ ಲೇಔಟ್, ರಾಣೇಬೆನ್ನೂರು ಸೇರಿದಂತೆ ಕೆಲವು ಕಡೆ ಅಗತ್ಯ ಬಿದ್ದರೆ ಕೈ ಪಾಳಯದ ಅಭ್ಯರ್ಥಿಗಳಿಗೆ ಆಪರೇಷನ್ ಮಾಡಲು ಮುಂದಾಗಿದ್ದಾರೆ. ಎದುರಾಳಿ ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ನಮಗೆ ಸೂಕ್ತ ಅಭ್ಯರ್ಥಿ ಮುಖ್ಯ. ದೋಸ್ತಿ ಮುಗಿದ ಕಥೆಯಾಗಿದ್ದು, ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿಯಾದರೂ ಪರವಾಗಿಲ್ಲ ಆಪರೇಷನ್ ಮಾಡಿ ಎಂದು ಕುಮಾರಸ್ವಾಮಿಯವರೇ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಇತ್ತ ಕೈ ಪಾಳಯದ ನೇತೃತ್ವ ವಹಿಸಿರುವ ಸಿದ್ದರಾಮಯ್ಯಗೆ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಹುಡುಕುವ ಜೊತೆಗೆ ತಮ್ಮ ಅಭ್ಯರ್ಥಿಗಳ ಆಪರೇಷನ್ ಆಗದಂತೆ ತಡೆಯಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಟಕ್ಕೆ ಬಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಫುಲ್ ಜೋಶ್ ನಲ್ಲಿ ಫೀಲ್ಡಿಗಿಳಿದು ಮಾಜಿ ದೋಸ್ತಿಗಳಿಗೆ ಆಪರೇಷನ್ ಭೀತಿ ಹುಟ್ಟಿಸಿದ್ದಾರೆ.