– ಮಾರ್ಗಮಧ್ಯೆ ಶರ್ಟ್, ಪ್ಯಾಂಟ್ ಬದಲಿಸಿ ಹೋಗಿರೋ ಶಂಕಿತ
ಬೆಂಗಳೂರು: ಕೆಫೆ ಬಾಂಬ್ ಬ್ಲಾಸ್ಟ್ (Bengaluru Blasts) ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿದೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಶಂಕಿತನ ಸುಳಿವು ಮಾತ್ರ ಶೂನ್ಯ. ಪೊಲೀಸರಿಗೆ ಸಣ್ಣ ಸುಳಿವು ಸಿಗದಂತೆ ತಂತ್ರಗಳನ್ನು ಬಳಸಿ ಶಂಕಿತ ಉಗ್ರ ಎಸ್ಕೇಪ್ ಆಗಿದ್ದಾನೆ.
ಶುಕ್ರವಾರ ಮಧ್ಯಾಹ್ನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಕೃತ್ಯ ನಡೆದು ಎರಡು ದಿನಗಳೇ ಕಳೆದರೂ ಆರೋಪಿಗೆ ಸಂಬಂಧಿಸಿದಂತೆ ಒಂದೇ ಒಂದು ಸುಳಿವು ಇಲ್ಲದಂತಾಗಿರುವುದು ಪೊಲೀಸರಿಗೆ ದೊಡ್ಡ ಕಗ್ಗಾಂಟಾಗಿ ಪರಿಣಮಿಸಿದೆ. ಸಿಸಿಬಿ ಹಾಗೂ ಇಂಟೆಲಿಜೆನ್ಸ್ ಅಧಿಕಾರಿಗಳ ತಂಡ ಆರೋಪಿಯ ಪತ್ತೆಗೆ ಫೀಲ್ಡಿಗಿಳಿದಿದ್ದಾರೆ. ಟವರ್ ಡಂಪ್, ಸಿಡಿಆರ್ ಅನಾಲಿಸಿಸ್ ಮಾಡಿ ವಿವಿಧ ಆಯಾಮಗಳಲ್ಲಿ ಪ್ರತ್ಯೇಕ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟಾದ್ರೂ ಆರೋಪಿಯ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಆರೋಪಿಯ ಸುಳಿವು ಸಿಕ್ಕಿದೆ – ಪರಮೇಶ್ವರ್ ಸ್ಫೋಟಕ ಮಾಹಿತಿ
ಆರೋಪಿ 11:30 ರ ಸುಮಾರಿಗೆ ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಬಂದ ಬಳಿಕ ಬಾಂಬ್ ಸ್ಫೋಟಗೊಳ್ಳುವಷ್ಟರಲ್ಲಿ ಸಿಟಿಯಿಂದ ಹೊರ ಹೋಗುವ ಪ್ಲ್ಯಾನ್ ಮಾಡಿದ್ದ. ಅದರಂತೆ ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್ಗೆ ಹೋಗೋಕೆ 59 ನಿಮಿಷಗಳು ಬೇಕು. ಒಂದು ವೇಳೆ ಟ್ರಾಫಿಕ್ ಇದ್ದರೂ 1 ಗಂಟೆ 15 ನಿಮಿಷದಲ್ಲಿ ತಲುಪಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಪ್ಲ್ಯಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅದರಂತೆ ಒಂದೂವರೆ ಗಂಟೆ ಸಮಯ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ. ಬ್ಲಾಸ್ಟ್ ಆದ ಬಳಿಕ ಪೊಲೀಸರ ಸ್ಥಳಕ್ಕೆ ಬರುವುದಕ್ಕೆ ಕನಿಷ್ಠ 10 ನಿಮಿಷಗಳು ಬೇಕು. ಬಳಿಕ ಎಲ್ಲಾ ಕಡೆ ಅಲರ್ಟ್ ಮಾಡಲು ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಯೋಜನೆ ಮಾಡಿಕೊಂಡಿರುವ ಶಂಕೆ ಇದೆ. ಬ್ಲಾಸ್ಟ್ ಆಗಿದ್ದೇ ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್ನಲ್ಲೂ ನಾಕಾಬಂದಿ ಹಾಕ್ತಾರೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಎನ್ನುವ ರೀತಿ ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಪ್ಲ್ಯಾನ್ ಮಾಡಿರುವಂತಿದೆ ಆರೋಪಿ. ಇದನ್ನೂ ಓದಿ: ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು
ಮತ್ತೊಂದೆಡೆ ಆರೋಪಿ ಬಾಂಬ್ ಇಟ್ಟ ಬಳಿಕ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಎನ್ನುವ ಸುಳಿವಿಲ್ಲ. ಹೀಗಾಗಿ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಬಾರ್ಡರ್ ವರೆಗಿನ ಹಾಗೂ ಕೆಫೆಯಿಂದ ವೈಟ್ಫೀಲ್ಡ್ ಮಾರ್ಗದಲ್ಲಿ ಚೆನ್ನಸಂದ್ರ, ಸರ್ಜಾಪುರ ಮಾರ್ಗದಲ್ಲಿ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನ ಪರಿಶೀಲಿಸಲಾಗಿದೆ. ಯಾವುದೇ ಸುಳಿವು ಸಿಗದೇ ತಲೆಕೆಡಿಸಿಕೊಂಡಿದ್ದಾನೆ ಆರೋಪಿ. ಮತ್ತೊಂದೆಡೆ ಆರೋಪಿ ಬಾಂಬ್ ಇಡುವ ವೇಳೆ ಧರಿಸಿದ್ದ ಶರ್ಟ್ ಹಾಗೂ ಪ್ಯಾಂಟ್ನ್ನು ಬದಲಾಯಿಸಿದ್ದಾನೆ ಎನ್ನುವ ಶಂಕೆಯೂ ಇದೆ. ಅಷ್ಟೇ ಅಲ್ಲದೆ ಎರಡು-ಮೂರು ಬಸ್ಗಳನ್ನು ಬದಲಾಯಿಸಿ, ರಾಜ್ಯದ ಗಡಿ ಬಿಟ್ಟು ಹೊರ ರಾಜ್ಯಕ್ಕೆ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.