ಧಾರವಾಡ: ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಧಾರವಾಡದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಯಾಗಿದ್ದ ಮನೋಹರ್ ಕೋಟಾರಗಸ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮನೋಹರ್ ತಂದೆ ಮಲ್ಲಪ್ಪ ಪೊಲೀಸ್ ತರಬೇತಿ ಸ್ಕೂಲ್ನ ಪ್ರಾಂಶುಪಾಲ ಆರ್.ಎ ಪಾರಶೆಟ್ಟಿ, ಪ್ರೇಯಸಿ ಆರತಿ ಸೇರಿ ಒಟ್ಟು 6 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರೇಯಸಿ ಆರತಿಗೆ ಪ್ರಾಂಶುಪಾಲ ಪಾರಶೆಟ್ಟಿ, ಮನೋಹರ್ ವಿರುದ್ಧ ದೂರನ್ನು ದಾಖಲಿಸಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಮನೋಹರ್, ನೇಣಿಗೆ ಶರಣಾಗುವ ಮುಂಚೆ 23 ಪುಟಗಳ ಡೆತ್ ನೋಟ್ ಬರೆದಿದ್ದ. ಜೊತೆಗೆ ಸೆಲ್ಫಿ ವಿಡಿಯೋ ಕೂಡ ಮಾಡಿಕೊಂಡಿದ್ದ.
ಸೆಲ್ಫಿ ವಿಡಿಯೋದಲ್ಲಿ ನಾನು ಎರಡು ವರ್ಷದಿಂದ ಪ್ರೀತಿಸಿದ ಯುವತಿಯಿಂದ ಮೋಸ ಆಗಿದೆ. ಆಕೆಯನ್ನು ಬಳಸಿ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಾರಶೆಟ್ಟಿ ನನ್ನ ಮೇಲೆ ಅತ್ಯಾಚಾರದ ದೂರು ದಾಖಲಾಗುವಂತೆ ಮಾಡಿದ್ದಾರೆ ಅಂತಾ ಹೇಳಿಕೊಂಡಿದ್ದ. ಅಲ್ಲದೇ ಆಕೆಯೊಂದಿಗೆ ಇದ್ದಾಗಿನ ವಿಡಿಯೋವನ್ನು ಆಕೆಯ ಸಮ್ಮತಿ ಮೇರೆಗೆ ನಾನು ರಿಕಾರ್ಡ್ ಮಾಡಿಕೊಂಡಿದ್ದೆ. ಅದು ನನ್ನ ಬಳಿಯೇ ಇದೆ ಅಂತಾ ವಿಡಿಯೋದಲ್ಲಿ ಹೇಳಿದ್ದ.
ಸದ್ಯ ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv