ರಾಯಚೂರು: ಜಿಲ್ಲೆಯಲ್ಲಿ ಒಂದೆಡೆ ಅಕ್ರಮ ಮರಳುಗಾರಿಕೆ ಜೋರಾಗಿದ್ದರೆ, ಇನ್ನೊಂದೆಡೆ ಮರಳುಗಾರಿಕೆ ನಡೆಸುವವರಿಂದ ಪೊಲೀಸರ ಮಾಮೂಲಿ ವಸೂಲಿ ದಂಧೆ ಮಿತಿ ಮೀರಿದೆ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ರಾಯಚೂರಿನ ಯರಗೇರಾ ಠಾಣಾ ಪೊಲೀಸರು ಟ್ರ್ಯಾಕ್ಟರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸ್ ಪೇದೆಗಳಿಂದ ಹಿಡಿದು ಪಿಎಸ್ಐ, ಸಿಪಿಐವರೆಗೆ ದುಡ್ಡು ಹಂಚಿಕೊಳ್ಳಲು ವಾರ, ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿ ಮಾಮೂಲಿಯನ್ನು ಪೀಕುತ್ತಿದ್ದಾರೆ. ಮರಳು ಸಾಗಿಸುತ್ತಿದ್ದ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ 60 ಸಾವಿರ ರೂಪಾಯಿ ಮಾಮೂಲಿ ನೀಡುವಂತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಆದರೆ ಟ್ರ್ಯಾಕ್ಟರ್ ಮಾಲೀಕ ಇದಕ್ಕೆ ಒಪ್ಪಲಿಲ್ಲ. ಬಳಿಕ ಪೊಲೀಸರು 20 ಅಥವಾ 25 ಸಾವಿರ ರೂ. ಹಣ ನೀಡುವಂತೆ ಕೇಳಿದ್ದಾರೆ. ಭೀಮಾಶಂಕರ್ ಹಣ ನೀಡಲು ತಡ ಮಾಡಿದ್ದಕ್ಕೆ ಪೊಲೀಸರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಭೀಮಾಶಂಕರ್ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಯರಗೇರಾ ಠಾಣೆ ಪೊಲೀಸ್ ಪೇದೆಗಳಾದ ಹನುಮಂತರಾಯ್, ಸಂತೋಷ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಪೇದೆ ಹನುಮಂತರಾಯ ಭೀಮಾಶಂಕರ್ ಗೆ ಹಣ ಕೊಡುವಂತೆ ಪದೇ ಪದೇ ಕಿರುಕುಳ ನೀಡಿದ್ದು ಮೊಬೈಲ್ ಆಡಿಯೋದಿಂದ ಬಹಿರಂಗಗೊಂಡಿದೆ.
ಹಣ ಕೊಡದಿದ್ದರೆ ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ಹೆದರಿಸಿ, ಹಣ ಪೀಕಲು ಮುಂದಾಗಿದ್ದರು, ಹಣ ನೀಡದಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಭೀಮಾಶಂಕರ್ ಆರೋಪ ಮಾಡಿದ್ದಾನೆ.