ಲಕ್ನೋ: ಪೊಲೀಸರು ಎತ್ತಿನ ಬಂಡಿ ಮಾಲೀಕನಿಗೆ ಒಂದು ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.
ಹೊಸ ಮೋಟಾರ್ ವಾಹನ ಕಾಯ್ದೆ ಅನ್ವಯವಾದಾಗಿನಿಂದ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಭಾರೀ ಮೊತ್ತದ ದಂಡವನ್ನು ಪಾವತಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಸಾಹಸಪುರ ಗ್ರಾಮದಲ್ಲಿ ಎತ್ತಿನ ಬಂಡಿಗೆ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ.
ರೈತ ರಿಯಾಜ್ ಹಸನ್ ತಮ್ಮ ಜಮೀನಿನ ಪಕ್ಕದಲ್ಲಿ ಬಂಡಿಯನ್ನು ನಿಲ್ಲಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಬ್ಇನ್ ಸ್ಪೆಕ್ಟರ್ ಪಂಕಜ್ ಕುಮಾರ್ ಮತ್ತು ಅವರ ತಂಡ ರಸ್ತೆ ಬದಿ ನಿಲ್ಲಿಸಿದ ಎತ್ತಿನ ಬಂಡಿ ನೋಡಿದ್ದಾರೆ. ಬಂಡಿ ಬಳಿ ಯಾರು ಇಲ್ಲದಿದ್ದನ್ನು ಕಂಡು ಗ್ರಾಮಸ್ಥರಿಗೆ ಕೇಳಿದಾಗ, ಅದು ರಿಯಾಜ್ ಹಸನ್ ಅವರದೆಂದು ತಿಳಿದಿದೆ. ಪೊಲೀಸರು ಎತ್ತಿನ ಬಂಡಿ ತೆಗೆದುಕೊಂಡು ಹಸನ್ ಮನೆಗೆ ಹೋಗಿ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡದ ಬಿಲ್ ನೀಡಿ ಹೋಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಿಯಾಜ್ ಹಸನ್, ನನ್ನ ಜಮೀನಿನ ಪಕ್ಕದಲ್ಲಿ ಬಂಡಿ ನಿಲ್ಲಿಸಿದ್ದಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಮೋಟಾರ್ ವಾಹನ ಕಾಯ್ದೆಯಡಿ ಹೇಗೆ ದಂಡ ಹಾಕಿದ್ರು ಎಂಬುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಶನಿವಾರ ದಂಡ ಹಾಕಿದ್ದ ಪೊಲೀಸರು ಭಾನುವಾರ ರದ್ದು ಮಾಡಿದ್ದಾರೆ.
ಗಸ್ತು ತಿರುಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕಬೇಕು ಎಂದು ಸೂಚಿಸಲಾಗಿತ್ತು. ಸಾಹಸಪುರ ಠಾಣಾ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ ಮೂಲಕವೇ ಮರಳು ಸಾಗಾಟ ಮಾಡಲಾಗುತ್ತದೆ. ಹಸನ್ ಸಹ ಬಂಡಿ ಮೂಲಕ ಮರಳು ಸಾಗಿಸುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಮೋಟಾರ್ ವಾಹನ ಕಾಯ್ದೆ ಮತ್ತು ಬೇರೆ ಅಪರಾಧಕ್ಕೆ ವಿಧಿಸುವ ದಂಡದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಮೋಟರ ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಸಾಹಸಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಡಿ.ಭಟ್ಟ ಸ್ಪಷ್ಟನೆ ನೀಡಿದ್ದಾರೆ.