– ಆತ್ಮಹತ್ಯೆಯೊಂದೇ ದಾರಿ ಎನ್ನುತ್ತಿರುವ ರೈತ
ಬೆಂಗಳೂರು: ಅಣ್ಣ ತಮ್ಮನ ಜಗಳದಿಂದ ಪೊಲೀಸರು ಲಾಭ ಪಡೆದಿದ್ದು, ಖಾಕಿ ದರ್ಪದಿಂದ ರೈತರೊಬ್ಬರು ಕಂಗಾಲಾಗಿರುವ ಘಟನೆ ನೆಲಮಂಗಲ ತಾಲೂಕಿನ ಹಲ್ಕೂರು ಗ್ರಾಮದಲ್ಲಿ ನಡೆದಿದೆ.
ಅನ್ನದಾತನ ಮೇಲೆ ಪೊಲೀಸರು ದರ್ಪ ಮೆರೆದಿರುವ ಆರೋಪ ಕೇಳಿಬರುತ್ತಿದೆ. ಗ್ರಾಮದ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ಇಬ್ಬರು ಅಣ್ಣ ತಮ್ಮಂದಿರು. ಈ ಇಬ್ಬರು ಸಹೋದರರ ಜಗಳ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯ ತೀರ್ಮಾನಕ್ಕೆಂದು ಬಂದಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೈಗೆ ಬಂದಿದ್ದ ಅಡಿಕೆ ಫಸಲನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ತೀವ್ರ ನಷ್ಟಕ್ಕೆ ತುತ್ತಾದ ರೈತ ಹನುಮಂತಪ್ಪ ನನಗೆ ಆತ್ಮಹತ್ಯೆಯೊಂದೇ ಉಳಿದಿರೋ ದಾರಿ ಎಂದು ಗೋಳಾಡುತ್ತಿದ್ದಾರೆ.
ಜಮೀನಿನ ವಿಚಾರಕ್ಕೆ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ನಡುವೆ ಜಗಳ ನಡೆಯುತ್ತಿತ್ತು. ಈ ಸಂಬಂಧ ಹಿಂದೆ ತಹಶೀಲ್ದಾರ್ ಅವರು ಜಗಳ ಇತ್ಯರ್ಥಗೊಳಿಸಿ ಈ ಜಮೀನು ಹನುಮಂತರಾಯಪ್ಪ ಅವರಿಗೆ ಸೇರಿದ್ದು, ಅವರಿಗೆ ಯಾವುದೇ ತೊಂದರೆ ಕೊಡುವ ಹಾಗಿಲ್ಲ ಎಂದು ಸಿದ್ದಗಂಗಯ್ಯನಿಗೆ ಎಚ್ಚರಿಸಿದ್ದರು. ಹಠ ಬಿಡದ ಸಿದ್ದಗಂಗಯ್ಯ ಅಣ್ಣನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದನು. ಹೀಗಾಗಿ ಅಣ್ಣ ತಮ್ಮನ ಸಮಸ್ಯೆ ಬಗೆಹರಿಸಲು ಪೊಲೀಸರು ಬಂದಿದ್ದರು.
ಕಟಾವು ವೇಳೆ ಬೇಕಾಬಿಟ್ಟಿ ಜಮೀನಿನಲ್ಲಿ ಅಡಿಕೆ ಸುರಿದು ಮೊದಲೇ ರೈತ ನಷ್ಟ ಅನುಭವಿಸುತ್ತಿದ್ದರು. ಈ ವೇಳೆ ಹನುಮಂತರಾಯಪ್ಪ ಅವರ ಜಮೀನಿಗೆ ಬಂದ ಪೊಲೀಸರು ಸಹೋದರರ ಸಮಸ್ಯೆ ಬಗೆಹರಿಸುವ ಬದಲು ಹನುಮಂತರಾಯಪ್ಪ ಮಾರಾಟ ಮಾಡಿದ 4 ಲಕ್ಷದ ಅಡಿಕೆ ಬೆಳೆ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಂಗಾಲಾಗಿರು ರೈತ ಕಣ್ಣೀರು ಹಾಕುತ್ತಿದ್ದಾರೆ. ತಮ್ಮನ ಜೊತೆ ಪೊಲೀಸರು ಕೈಜೋಡಿಸಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.