ಬೆಂಗಳೂರು: ಬಂಧಿಸಲು ಹೋಗಿದ್ದ ಪೊಲೀಸರ ವಿರುದ್ಧವೇ ರೌಡಿಶೀಟರ್ ತಿರುಗಿಬಿದ್ದ ಹಿನ್ನೆಲೆ ಆತನ ಕಾಲಿಗೆ ಖಾಕಿಪಡೆ ಗುಂಡು ಹೊಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ರೌಡಿಶೀಟರ್ ಅನಿಲ್ ಅಲಿಯಾಸ್ ಚಾಂಡಲ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾಟನ್ ಪೇಟೆಯ ವೆಟರ್ನರಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಕೊಲೆ, ಕೊಲೆಯತ್ನ ಸೇರಿದಂತೆ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅನಿಲ್ ಶಾಮಿಲಾಗಿದ್ದನು ಎನ್ನಲಾಗಿದೆ.
ತಡರಾತ್ರಿ ಅನಿಲ್ ಬಗ್ಗೆ ಖಚಿತ ಮಾಹಿತಿ ದೊರಕಿದ ಬಳಿಕ ಆತನನ್ನು ಪೊಲೀಸರು ಸೆರೆಹಿಡಿಯಲು ತೆರಳಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅನಿಲ್ ಪೊಲೀಸರ ಮೇಲೆ ತಿರುಗಿಬಿದ್ದಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ಫೈರಿಂಗ್ ಮಾಡಿದ್ದಾರೆ.
ಅನಿಲ್ ಕಾಲಿಗೆ ಗುಂಡು ತಗಲಿದ್ದು, ಸದ್ಯ ಆತನನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.