ಚಾಮರಾಜನಗರ: ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದವ ವಾಹನ ತಪಾಸಣೆ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಘಟನೆ ಹಾಸನೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಚಾಮರಾಜನಗರದ ಬಾರ್ಡರ್ ತಮಿಳುನಾಡಿನ ಹಾಸನೂರು ಚೆಕ್ ಪೋಸ್ಟ್ ನಲ್ಲಿ ಹಾಸನೂರು ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಹಾರಾಷ್ಟ್ರದಿಂದ ತಮಿಳುನಾಡಿನ ಕಡೆ ಹೋಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದ್ದಾರೆ. ಆ ಕಾರಿನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 1.5 ಕೋಟಿ ರೂ. ಹಣ ಪತ್ತೆಯಾಗಿದೆ.
ಮಹಾರಾಷ್ಟ್ರ ಮೂಲದ ಎಂಎಚ್-14- ಇಎಚ್9189 ವಾಹನದ ಮೂಲಕ ಹಣ ಸಾಗಣೆ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ತಕ್ಷಣ ಹಾಸನೂರು ಪೊಲೀಸರು ಕಾರು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಹಾಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೆ ಅಕ್ರಮ ಖೋಟಾ ನೋಟು ಸಾಗಾಟದ ಪ್ರಕರಣದಲ್ಲಿ 3.16 ಕೋಟಿ ಪತ್ತೆಯಾಗಿತ್ತು. ಇದೀಗ ಅಸಲಿ ನೋಟು ಸಾಗಾಟ ಪ್ರಕರಣ ಪತ್ತೆಯಾಗಿದೆ.