ಬೆಳಗಾವಿ: ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಹಾಮೇಳಾವ್ಗೆ (Maha Melava) ಅನುಮತಿ ನೀಡಿಲ್ಲ. ಬೆಳಗಾವಿಯಲ್ಲಿ (Belagavi) ಕಿಡಿಗೇಡಿಗಳು ಬಾಲ ಬಿಚ್ಚಿದ್ರೆ ನಾವು ಸುಮ್ಮನಿರಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಎಚ್ಚರಿಕೆ ನೀಡಿದ್ದಾರೆ.
ನಾಡದ್ರೋಹಿ ಎಂಇಎಸ್ (MES) ನಡೆಸುತ್ತಿದ್ದ ಮಹಾಮೇಳಾವ್ಗೆ ಮೊದಲ ಬಾರಿಗೆ ಬ್ರೇಕ್ ಹಾಕಿರುವ ವಿಚಾರಕ್ಕೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾಮೇಳಾವ್ ನಡೆಸದಂತೆ ನಾವು ನಿನ್ನೆಯೇ ಎಂಇಎಸ್ ನಾಯಕರಿಗೆ ಸೂಚನೆ ನೀಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಮಹಾಮೇಳಾವ್ಗೆ ಅನುಮತಿ ನೀಡಿಲ್ಲ. ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಮಹಾಮೇಳಾವ್ ನಡೆಸಲು ನಾವು ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್ಗೆ ಬ್ರೇಕ್
ಪ್ರತಿವರ್ಷವೂ ಅನುಮತಿ ಪಡೆಯದಿದ್ದರೂ ಮಹಾಮೇಳಾವ್ ಮಾಡ್ತಿದ್ರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಹಿಂದೆ ನಡೆದಿದ್ದೇನು? ಹಿಂದಿನ ಪೊಲೀಸರು ತೆಗೆದುಕೊಂಡ ನಿರ್ಧಾರ ಬಗ್ಗೆ ನಾನು ಮಾತನಾಡಲ್ಲ. ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಅಧಿವೇಶನ ಕಾರಣಕ್ಕೆ ಇಲ್ಲಿ ಹೋಟೆಲ್ ಉದ್ಯಮ ಅಭಿವೃದ್ಧಿ ಹೊಂದುತ್ತಿದೆ. ರಿಯಲ್ ಎಸ್ಟೇಟ್ ಸೇರಿ ಹಲವು ಕ್ಷೇತ್ರಗಳಲ್ಲಿ ಬೆಳಗಾವಿ ಅಭಿವೃದ್ಧಿ ಹೊಂದುತ್ತಿದೆ. ಅಧಿವೇಶನ ನೋಡಲು ಬೇರೆ ಜಿಲ್ಲೆಗಳ ಜನರು ಬೆಳಗಾವಿಗೆ ಬರುತ್ತಾರೆ. ಅಧಿವೇಶನ ನಡೆಯುವಾಗ ಯಾವುದೇ ಕಪ್ಪು ಚುಕ್ಕೆ ಬರಬಾರದು. ಎಲ್ಲರೂ ಸ್ನೇಹ-ಪ್ರೀತಿಯಿಂದ ನಡೆದುಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ. ಆದರೆ, ಬೆಳಗಾವಿ ವಿಚಾರದಲ್ಲಿ ಯಾರೇ ಕಿಡಿಗೇಡಿಗಳು ಬಾಲ ಬಿಚ್ಚಿದ್ರೆ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರಿಂದ ನಾಡದ್ರೋಹಿ ಘೋಷಣೆ – 20ಕ್ಕೂ ಹೆಚ್ಚು ಮಂದಿ ವಶ
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ಡಿ.22 ರಂದು ಬೃಹತ್ ಪ್ರತಿಭಟನೆ ವಿಚಾರಕ್ಕೆ, ಶಾಂತಿಯುತ ಪ್ರತಿಭಟನೆಗೆ ನಮ್ಮ ಅಭ್ಯಂತರವೇನೂ ಇಲ್ಲ. ನಮ್ಮ ಸಹಕಾರ ಕೊಡುತ್ತೇವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದ್ರೆ ನಾನು ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.