ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಯಾರು ಎಂಬ ಪ್ರಶ್ನೆಗೆ ಇವತ್ತು ಉತ್ತರ ಸಿಗಲಿದೆ.
ಇಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿ ಸಂಪತ್ ರಾಜು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮೇಯರ್ ಅಭ್ಯರ್ಥಿ ಮುನಿಸ್ವಾಮಿ, ಉಪ ಮೇಯರ್ ಅಭ್ಯರ್ಥಿಯಾಗಿ ಮಮತ ವಾಸುದೇವ್ ನಾಮ ಪತ್ರ ಸಲ್ಲಿಸಿದ್ದಾರೆ.
ಪದ್ಮಾವತಿ ಅವ್ರನ್ನ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಅಂತ ಬಿಬಿಎಂಪಿ ಕಚೇರಿಯಲ್ಲಿ ಜೆಡಿಎಸ್ ಶಾಸಕ ಶರವಣ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆದೇಶದಂತೆ ಆಯ್ಕೆ ನಡೆದಿದೆ. ಹಿಂದುಳಿದ ವರ್ಗಕ್ಕೆ ಉಪ ಮೇಯರ್ ಸ್ಥಾನ ನೀಡಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ಮನಸ್ಸಿನಲ್ಲಿ ಇಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಎಲ್ಲಾ ಸದಸ್ಯರು, ಶಾಸಕರು ಒಮ್ಮತದಿಂದ ಅಭ್ಯರ್ಥಿ ಆಯ್ಕೆಗೆ ಒಪ್ಪಿಗೆ ನೀಡಿದ್ದಾರೆ ಅಂತ ಶರವಣ ಹೇಳಿದ್ರು.
11.30ಕ್ಕೆ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ. 11.30ರೊಳಗಾಗಿ ಮತದಾರ ಸದಸ್ಯರು ಕೌನ್ಸಿಲ್ ಒಳಗೆ ಉಪಸ್ಥಿತರಿರಬೇಕು. ಅವರ ಹಾಜರಾತಿ ಪಡೆಯಲಾಗುತ್ತದೆ. ಆನಂತರ ಬಂದವರಿಗೆ ಮತದಾನದ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪರ, ವಿರೋಧ ಹಾಗೂ ತಟಸ್ಥರಾದವರು ಕೈ ಎತ್ತುವ ಮೂಲಕ ಮತದಾನ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗುತ್ತದೆ. ಪ್ರಾದೇಶಿಕ ಆಯುಕ್ತೆ ಜಯಂತಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇಂದೇ ಫಲಿತಾಂಶ ಹೊರಬೀಳಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿ ಸುತ್ತ ಪೊಲೀಸ್ ಭದ್ರತೆ ನೀಡಲಾಗಿದೆ. ಮತದಾರರು, ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಬಿಟ್ಟು ಬೇರೆಯವರಿಗೆ ನೋ ಎಂಟ್ರಿ ಹಾಗೂ ಪಾಸ್ ಇದ್ದವರಿಗೆ ಮಾತ್ರ ಬಿಬಿಎಂಪಿ ಆವರಣದಲ್ಲಿ ಪ್ರವೇಶವಿರುತ್ತದೆ.