ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

Public TV
1 Min Read
BiharPolice

ಪಾಟ್ನಾ: ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರ ಬುಧವಾರದಂದು ಬಾಲುವಾ ಬಜಾರ್ ಪ್ರದೇಶದಲ್ಲಿ ನೆರವೇರಿದೆ. ಆದರೆ ಈ ವೇಳೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸರು 21 ಗುಂಡುಗಳನ್ನು ಹಾರಿಸುವಲ್ಲಿ ವಿಫಲವಾಗಿದ್ದಾರೆ.

ಸಂಪ್ರದಾಯದ ಪ್ರಕಾರ, ಸರ್ಕಾರದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸುತ್ತಾರೆ. ಹಾಗೆಯೇ ಬಿಹಾರದ ಮಾಜಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು.

BiharPolice 1

ಆದರೆ ಕೊನೆ ಕ್ಷಣದಲ್ಲಿ ಗುಂಡನ್ನು ಹಾರಿಸಿದಾಗ ಯಾವ ರೈಫಲ್‍ನಿಂದ ಕೂಡ ಗುಂಡು ಹಾರಲೇ ಇಲ್ಲ. ಪೊಲೀಸ್ ಪೇದೆಗಳು, ಹಿರಿಯ ಅಧಿಕಾರಿಗಳು ಗುಂಡನ್ನು ಹಾರಿಸಲು ಪ್ರಯತ್ನಿಸಿದರೂ ರೈಫಲ್‍ನಿಂದ ಒಂದೇ ಒಂದು ಗುಂಡು ಕೂಡ ಹಾರಲಿಲ್ಲ.

ಈ ವೇಳೆ ಸ್ಥಳದಲ್ಲಿ ಬಿಹಾರ ಸಿಎಂ ನಿತಿಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಂತಹ ಸಂದರ್ಭದಲ್ಲಿ ರೈಫಲ್ ಕೈಕೊಟ್ಟ ಕಾರಣಕ್ಕೆ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ. ಸರಿಯಾಗಿ ರೈಫಲ್‍ಗಳನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ಈ ಅವಮಾನವಾಗಿದೆ ಎಂದು ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಎಸ್‍ಪಿ ಮೃತ್ಯುಂಜಯ ಚೌಧರಿ ಪ್ರತಿಕ್ರಿಯಿಸಿ, ನಾವು ಈ ಬಗ್ಗೆ ತನಿಖೆ ಆರಂಭಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *