ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುದುರೆಮನೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 3 ಲಕ್ಷ ರೂಪಾಯಿ ನಗದು ಹಾಗು 40ಕ್ಕೂ ಹೆಚ್ಚಿನ ಬೈಕುಗಳ ಭರ್ಜರಿ ಬೇಟೆಯಾಡಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಡಿಸಿಪಿ ಸೀಮಾ ಲಾಟಕರ ಹಾಗೂ ಇಬ್ಬರು ಪಿಎಸ್ಐ ಸೇರಿದಂತೆ 15 ಮಂದಿಯಿಂದ ಕುದುರೆಮನೆ ಗ್ರಾಮದ ತೋಟದ ಮನೆಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 40 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಿಗೆ ಬಳಸುತ್ತಿದ್ದ 3 ಲಕ್ಷ ರೂಪಾಯಿ ಹಾಗೂ 40ಕ್ಕೂ ಹೆಚ್ಚು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ದಂಧೆಕೋರರು ಕ್ರೈಂ ವಿಭಾಗದ ಪಿಎಸ್ಐ ರಮೇಶ್ ಹೂಗಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದಾರೆ. ದಂಧೆಕೋರರು ತೋಟದ ಮನೆಯಲ್ಲಿ ತಾತ್ಕಾಲಿಕ ಶೆಡ್ಡಿನ ಮನೆಯನ್ನು ನಿರ್ಮಿಸಿಕೊಂಡು, ಹಲವು ದಿನಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಮಟ್ಕಾ ದಂಧೆಯ 40 ಮಂದಿಯನ್ನು ಬಂಧಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆಂದು ಡಿಸಿಪಿ ಸೀಮಾ ಲಾಟಕರ್ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv