ಮುಂಬೈ: ಕೆಲವು ದಿನಗಳ ಹಿಂದೆ ಕಾಣೆಯಾಗಿ ಕುಟುಂಬದಿಂದ ಬೇರ್ಪಟ್ಟಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಲ್ಲೂ ಯುವತಿ ಹೇಳಿಕ ಎರಡೇ ಎರಡು ಪದಗಳನ್ನ ಇಟ್ಟುಕೊಂಡು ಪೊಲೀಸರು ಆಕೆಯ ಪೋಷಕರನ್ನ ಪತ್ತೆ ಮಾಡಿದ್ದಾರೆ.
ಮಾನಸಿಕ ಅಸ್ವಸ್ಥ ಯುವತಿ ಕೇವಲ ಸತ್ಸಂಗ್ ಮತ್ತು ಭಾಯಂದರ್ ಎಂಬ ಎರಡು ಪದಗಳನ್ನಷ್ಟೇ ಹೇಳಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಮುಂಬೈ ಬಳಿಯ ಭಾಯಂದರ್ ಪ್ರದೇಶಕ್ಕೆ ಭೇಟಿ ನೀಡಿ, ಸಿಕ್ಕ ಮಾಹಿತಿಯನ್ನ ಒಂದಕ್ಕೊಂದು ಜೋಡಿಸಿ ಪೋಷಕರನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ತಂಡ ಮೊದಲಿಗೆ ಭಾಯಂದರ್ನಲ್ಲಿ ನಡೆದ ಹಾಗೂ ನಡೆಯುತ್ತಿರುವ ಸತ್ಸಂಗಗಳ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ನಂತರ ಈ ಹಿಂದೆ ನಡೆದ ಸತ್ಸಂಗಗಳ ಆಯೋಜಕರು ಹಾಗೂ ಅವುಗಳಲ್ಲಿ ಭಾಗಿಯಾದ ಜನರನ್ನ ಮಾತನಾಡಿಸಿದ್ದರು.
ಆಗಿದ್ದೇನು?: ಜನವರಿ 1ರಂದು ಸಂಜೆ 5.30ರ ವೇಳೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆಯೊಂದು ಬಂದಿತ್ತು. ಅಪರಿಚಿತ ಯುವತಿಯೊಬ್ಬಳು ವಡಾಲಾದ ಬಿಪಿಟಿ ಕಾಲೋನಿಯ ರಸ್ತೆ ಮೇಲೆ ಬಿದ್ದಿದ್ದಾಳೆಂದು ಮಾಹಿತಿ ಪಡೆದಿದ್ದರು. ನಂತರ ಕಂಟ್ರೋಲ್ ರೂಮಿನವರು ವಡಾಲಾದಲ್ಲಿನ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು. ಬಳಿಕ ಪೊಲೀಸ್ ವ್ಯಾನ್ನಲ್ಲಿ ಸಬ್ ಇನ್ಸ್ ಪೆಕ್ಟರ್ ಸಂದೀಪ್ ಪವಾರ್ ಸ್ಥಳಕ್ಕೆ ಭೇಟಿ ನೀಡಿದಾಗ, ಯುವತಿ ಮಾತನಾಡಲೂ ಕಷ್ಟಪಡುತ್ತಿದ್ದು, ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದಳು.
ಮೊದಲಿಗೆ ಯುವತಿಯನ್ನ ಪರೇಲ್ನ ಕೆಇಎಮ್ ಆಸ್ಪತ್ರೆಗೆ ದಾಖಲಿಸಿ ನಂತರ ಜೆಜೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಯುವತಿಯನ್ನ ನೋಡಿಕೊಳ್ಳಲು ಮಹಿಳಾ ಪೇದೆಯರನ್ನ ನಿಯೋಜಿಸಲಾಗಿತ್ತು. ಶಿಫ್ಟ್ಗಳಲ್ಲಿ ಕೆಲಸ ಮಾಡಿದ ಮಹಿಳಾ ಪೇದೆಗಳು ಯುವತಿಯೊಂದಿಗೆ ಮಾತನಾಡಲು ಪ್ರತ್ನಿಸಿದ್ದರು. ಆದ್ರೆ ಯುವತಿ ಸಂತ್ಸಂಗ್, ಭಾಯಂದರ್ ಎಂಬ ಎರಡು ಪದಗಳನ್ನು ಮಾತ್ರ ಹೇಳುತ್ತಿದ್ದಳು.
ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಬಳಿ ಇದ್ದ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಮಾಡಿದೆವು. ನಾನು ಭಾಯಂದರ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ, ಯಾವುದಾದ್ರೂ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ಯಾ ಎಂದು ಪರಿಶೀಲಿಸಿದೆ. ಆದ್ರೆ ಆ ರೀತಿ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಅವರು ತಿಳಿಸಿದರು ಎಂದು ಪಿಎಸ್ಐ ಸಂದೀಪ್ ಪವಾರ್ ಹೇಳಿದ್ದಾರೆ.
ನಂತರ ಪವಾರ್ ಅವರು ಆ ಪ್ರದೇಶದಲ್ಲಿ ಇತ್ತೀಚೆಗೆ ಯಾವುದಾದ್ರೂ ಸತ್ಸಂಗ ನಡೆದಿತ್ತಾ ಎಂದು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದರು. ಕಳೆದ ವಾರ ಅಂತಹ ಎರಡು ಮೂರು ಕಾರ್ಯಕ್ರಮಗಳು ನಡೆದಿವೆ ಎಂಬ ಮಾಹಿತಿ ಸಿಕ್ಕಿತ್ತು.
ಇದನ್ನಾಧರಿಸಿ ಜನವರಿ 7ರಂದು ಕಾರ್ಯಕ್ರಮ ನಡೆದ ಒಂದು ಸ್ಥಳಕ್ಕೆ ಭೇಟಿ ನೀಡಿದ ಪವಾರ್, ದೇರಾ ಸಚ್ಛಾ ಸೌದಾ ಸತ್ಸಂಗ ಆಯೋಜಕರಿಗೆ ಯುವತಿಯ ಫೋಟೋ ತೋರಿಸಿ ವಿಚಾರಿಸಿದ್ದರು. ಸತ್ಸಂಗದಲ್ಲಿ ಭಾಗವಹಿಸಿದ್ದ ಕುಟುಂಬವೊಂದು, ಸುಮಾರು ಇದೇ ವಯಸ್ಸಿನ ತಮ್ಮ ಮಗಳನ್ನ ಕಳೆದುಕೊಂಡಿದ್ದಾರೆಂದು ಆಯೋಜಕರು ಹೇಳಿದ್ದರು. ನಂತರ ಸತ್ಸಂಗ ಆಯೋಜಕರು ಮಗಳನ್ನು ಕಳೆದುಕೊಂಡಿದ್ದ ಕುಟುಂಬದವರನ್ನ ಸಂಪರ್ಕಿಸಲು ಪವಾರ್ ಅವರಿಗೆ ಸಹಾಯ ಮಾಡಿದ್ದರು.
ನಾನು ಸೂರತ್ ಮೂಲದ ಕುಟುಂಬವನ್ನ ಸಂಪರ್ಕಿಸಿ ಯುವತಿಯ ಫೋಟೋವನ್ನ ಹಂಚಿಕೊಂಡೆ. ಅವರು ಕೂಡಲೇ ಅದು ನಮ್ಮ ಮಗಳು ಫಲ್ಗುಣಿ ಪಟೇಲ್ ಎಂದು ಗುರುತಿಸಿದ್ರು. ಯುವತಿ ದಲ್ಸುಖ್ ಪಟೇಲ್ ಎಂಬವರ ಮಗಳಾಗಿದ್ದು ಕುಟಂಬಸ್ಥರು ಸತ್ಸಂಗದಲ್ಲಿ ಭಾಗವಹಿಸಲು ವಾಸೈ ರೈಲ್ವೆ ನಿಲ್ದಾಣಕ್ಕೆ ಬಂದಾಗ ಕಾಣೆಯಾಗಿದ್ದಳು. ಕುಟುಂಬಸ್ಥರು ಈಗ ಮುಂಬೈಗೆ ಬಂದಿದ್ದು, ಯುವತಿಯನ್ನ ಅವರಿಗೆ ಒಪ್ಪಿಸಲಾಗಿದೆ ಎಂದು ಪವಾರ್ ಹೇಳಿದ್ರು.