ಕಾರವಾರ: ಹೆಲ್ತ್ ಎಮರ್ಜೆನ್ಸಿ ಇದ್ದರೂ ಅನವಶ್ಯಕವಾಗಿ ಓಡಾಡಿ, ಪೊಲೀಸರಿಗೇ ಧಮ್ಕಿ ಹಾಕಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಕೆ.ಎಮ್ ಶಾಝೀರ್(39) ಎಂಬವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಲಾಕ್ಡೌನ್ ಇದ್ದರೂ ಈತ ಬೈಕ್ನಲ್ಲಿ ಅನವಶ್ಯಕವಾಗಿ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದನು. ಅಷ್ಟೇ ಅಲ್ಲದೇ ತನ್ನನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 270, 504, 506 ಹಾಗೂ 188 ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ.
ಸಾರ್ವಜನಿಕರಿಗೆ ಪೆಟ್ರೋಲ್ ಬಂದ್:
ಜಿಲ್ಲಾಡಳಿತ ಜನರು ಮನೆಯಿಂದ ಹೊರ ಬರದಂತೆ ಆದೇಶ ನೀಡಿದರೂ ಹಲವರು ನಗರ ಪ್ರದೇಶದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ನಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ನೀಡುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕೇವಲ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾತ್ರ ಪೆಟ್ರೋಲ್ ನೀಡಲು ಜಿಲ್ಲಾಡಳಿತ ಪೆಟ್ರೋಲ್ ಬಂಕ್ಗಳಿಗೆ ಸೂಚನೆ ನೀಡಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಮನೆ ಬಾಗಿಲಿಗೆ ಕಳುಹಿಸಿ ಕೊಡಲಾಗುತ್ತಿದ್ದು, ಜನರು ಇದರ ಉಪಯೋಗ ಪಡೆದುಕೊಂಡು ಮನೆಯಲ್ಲಿರುವಂತೆ ಜಿಲ್ಲಾಡಳಿತ ತಿಳಿಸಿದೆ.
ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳ ಮನವಿ:
ಪತ್ರಕರ್ತರು ಹಲವು ಸ್ಥಳಗಳಿಗೆ ತೆರಳಿ ಸುದ್ದಿ ಮಾಡುತ್ತಿರುತ್ತೀರಿ. ಕೊರೊನಾ ಪೀಡಿತ ವ್ಯಕ್ತಿಗಳು ಜಿಲ್ಲೆಯ ಹಲವು ಭಾಗದಲ್ಲಿ ಓಡಾಡಿದ್ದರಿಂದ ನೀವು ಜಾಗೃತರಾಗಿರಬೇಕಿದೆ. ಪತ್ರಕರ್ತರು ಮನೆಯಲ್ಲಿಯೇ ಇದ್ದು ಸುದ್ದಿ ಮಾಡಬೇಕು. ಆದಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.