ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಹಾಗೂ ಅವರ ಪತ್ನಿಯನ್ನು ರಾಜ-ರಾಣಿಯಂತೆ ಕೂರಿಸಿ ಅವರ ಮೇಲೆ ಹೂಮಳೆಗೆರೆದ ಘಟನೆ ವಿವಾದಕ್ಕೆ ಕಾರಣವಾಗಿದೆ.
ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿದ್ದ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ ಐ ಶೀಗಿಹಳ್ಳಿ, ಎಸ್ ಐ ವಿಶ್ವನಾಥ್ ಮಲ್ಲಣ್ಣವರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಸಕರು ಹಾಗೂ ಅವರ ಪತ್ನಿಯನ್ನು ಕೂರಿಸಿ ಇಬ್ಬರ ಮೇಲೆ ಹೂವಿನ ಮಳೆಗರೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್ಡಿಕೆಗೆ ಜೆಡಿಎಸ್ ಶಾಸಕ ಟಾಂಗ್
ಶಾಸಕರ ಹಾಗೂ ಪೊಲೀಸ್ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖೆ ನಿಯಮದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.