ರಾಯಚೂರು: ನಗರದ ಜಿಲ್ಲಾ ಕಾರಾಗೃಹದಲ್ಲೊಂದು ಅಪರೂಪದ ಕಾರ್ಯಕ್ರಮ ನಡೆದಿದೆ. ವಿಚಾರಣಾಧೀನ ಕೈದಿಯೊಬ್ಬರ ಮಗುವಿಗೆ ನಾಮಕರಣ ಹಾಗು ತೊಟ್ಟಿಲು ಕಾರ್ಯಕ್ರಮವನ್ನು ಜೈಲಿನಲ್ಲಿ ಮಾಡಲಾಗಿದೆ.
ವಿಚಾರಣಾಧೀನ ಕೈದಿ ಭಾಗ್ಯಮ್ಮ ಜುಲೈ 2 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇಂದು ಕಾರಾಗೃಹದಲ್ಲೇ ಚಂದದ ಕಾರ್ಯಕ್ರಮ ಮಾಡಿ, ವಿವಿಧ ಗಣ್ಯರನ್ನ ಕರೆಸಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ಅವರಿಂದ ಮಗುವಿಗೆ `ಕೃಷ್ಣವೇಣಿ’ ಎಂದು ನಾಮಕರಣ ಮಾಡಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಜೈಲಿನ ಎಲ್ಲ ಸಿಬ್ಬಂದಿ ಹಾಗೂ ಕೈದಿಗಳಿಗೆ ಸಿಹಿ ಹಂಚಲಾಗಿದೆ.
2017ರಲ್ಲಿ ಮಾನ್ವಿ ಪಟ್ಟಣದಲ್ಲಿ ಕಳ್ಳತನ ಹಾಗು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಶಿಷಾಬಾಯಿ ಅಲಿಯಾಸ್ ಭಾಗ್ಯಮ್ಮ ಜೈಲು ಸೇರುವ ವೇಳೆ ಐದು ತಿಂಗಳು ಗರ್ಭಿಣಿಯಾಗಿದ್ದರು.