ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮತ್ತೆ ಖಾಕಿ ರಿವಾಲ್ವರ್ ಸದ್ದು ಮಾಡಿದೆ. ಬಾಲಕನನ್ನ ಅಪಹರಣ ಮಾಡಿದ್ದ ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡು ಹಾರಿಸಿದ್ದಾರೆ.
ಕೆಂಗೇರಿ ಸಮೀಪದ ವಿಶ್ವೇಶ್ವರನಗರ ಬಳಿ ಈ ಶೂಟೌಟ್ ನಡೆದಿದ್ದು, ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಆರೋಪಿ ದಿವ್ಯತೇಜ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಏನಿದು ಘಟನೆ?: ಬೆಂಗಳೂರಿನ ಕೆಪಿ ಅಗ್ರಹಾರದ ಮಂಜುನಾಥ್ ನಗರದ ರಾಜೇಶ್ ಮತ್ತು ಮಾಲಾ ದಂಪತಿಯ 5 ವರ್ಷದ ಮಗ ಚಂದನ್ ಎಂಬಾತನನ್ನು ಅಪಹರಣ ಮಾಡಲಾಗಿತ್ತು. ಭಾನುವಾರ ಚಂದನ್ ತಾಯಿ ಮಾಲಾರ ಬರ್ತ್ ಡೇ ಇತ್ತು. ಈ ಖುಷಿಯಲ್ಲಿದ್ದ ಪೋಷಕರು ದೇವಸ್ಥಾನಕ್ಕೆ ಹೋಗಲು ಮೊದಲು ಮಗುವನ್ನು ರೆಡಿ ಮಾಡಿ ಆಟವಾಡೋಕೆ ಬಿಟ್ಟು, ನಂತ್ರ ತಾವು ರೆಡಿ ಆಗುತ್ತಿದ್ದರು. ಈ ವೇಳೆ ನಾನು ನಿಮ್ಮ ಮಾವ ಅಂತಾ ಬಂದ ವ್ಯಕ್ತಿಯೊಬ್ಬ ಮಗುವನ್ನು ಕಿಡ್ನಾಪ್ ಮಾಡಿ ಪರಾರಿಯಾಗಿದ್ದನು.
ಇದೇ ವೇಳೆ ಫೋನ್ ಮಾಡಿದ ಕಿಡ್ನಾಪರ್, ನಿಮಗೆ ನಿಮ್ಮ ಮಗು ಬೇಕಾದ್ರೆ 30 ಸಾವಿರ ಕೊಡಿ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾನೆ. ಆದ್ರೆ ಸೋಮವಾರ ಬೆಳಗಿನ ಜಾವ ಮತ್ತೆ ಫೋನ್ ಮಾಡಿ ಅದು 30 ಸಾವಿರ ಅಲ್ಲ, 30 ಲಕ್ಷ ಕೊಡಿ ಅಂತಾ ಬೇಡಿಕೆ ಇಟ್ಟಿದ್ದನು.
ಸದ್ಯ ಪ್ರಕರಣ ಕುರಿತಂತೆ ಪೊಲೀಸರು ಮಗುವನ್ನು ಪೋಷರ ಕೈಗೆ ಒಪ್ಪಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.