ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ವಸೀಂ ಹಾಗೂ ಫಯಾಜ್ ಎಂಬವರ ಮೇಲೆ ಕಾಲಿಗೆ ಹೆಣ್ಣೂರು ಇನ್ಸ್ ಪೆಕ್ಟರ್ ಕುಲಕರ್ಣಿ ಹಾಗೂ ಕೆ.ಜಿ ಹಳ್ಳಿ ಇನ್ಸ್ ಪೆಕ್ಟರ್ ಎಲ್ವಿನ್ ಗುಂಡು ಹಾರಿಸಿದ್ದಾರೆ. ಕೆಜಿ ಹಳ್ಳಿ ಕ್ರಾಸ್ ಬಳಿ ಮೇ 27ರಂದು ರೌಡಿಶೀಟರ್ ಶಾಹಿದ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.
ಹಳೆ ದ್ವೇಷ ಹಾಗೂ ಹಣಕಾಸಿನ ವಿಚಾರವಾಗಿ ಆರೋಪಿಗಳು ಶಾಹಿದ್ನನ್ನು ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ ಆರೋಪಿಗಳು ಹೆಣ್ಣೂರು ಸಮೀಪದ ಅರ್ಕಾವತಿ ಲೇಔಟ್ ನಲ್ಲಿದ್ದರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋಗಿದ್ದರು.
ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಪೊಲೀಸ್ ಪೇದೆ ಸಿದ್ದಲಿಂಗಯ್ಯ ತೋಳಿಗೆ ಗಾಯವಾಗಿದ್ದು, ಪ್ರಾಣ ರಕ್ಷಣೆಗೆ ಇಬ್ಬರು ಇನ್ಸ್ ಪೆಕ್ಟರ್ ಗಳು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.
ವಸೀಂ ಬಲಗಾಲು ಹಾಗೂ ಫಯಾಜ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.