ಬೆಂಗಳೂರು: ಕೊಲೆ ಆರೋಪಿ ಮೇಲೆ ರಾಜಗೋಪಾಲನಗರ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಕೆರೆ ಬಳಿ ನಡೆದಿದೆ.
ಆರೋಪಿ ಸಚಿನ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇದೇ ತಿಂಗಳು 2ರಂದು ಆರೋಪಿ ಸಚಿನ್, ಚೌಕಿ ನರಸಿಂಹ ಎಂಬಾತನನ್ನು ಕೊಲೆ ಮಾಡಿದ್ದನು. ಸಚಿನ್ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ನಲ್ಲಿ ಮದ್ಯ ಕುಡಿದು ಚೌಕಿ ನರಸಿಂಹನನ್ನು ಕೊಲೆ ಮಾಡಿದ್ದನು. ಹಾಗಾಗಿ ಪೊಲೀಸರು ಆರೋಪಿ ಸಚಿನ್ನನ್ನು ಬುಧವಾರ ರಾತ್ರಿ ಮಂಡ್ಯದಲ್ಲಿ ಬಂಧಿಸಿದ್ದಾರೆ.
ಇಂದು ಮುಂಜಾನೆ ಆರೋಪಿ ಕೊಲೆಗೆ ಬಳಸಿದ್ದ ಆಯುಧವನ್ನು ಪೊಲೀಸರು ರಿಕವರಿ ಮಾಡಲು ತೆರಳಿದ್ದರು. ಈ ವೇಳೆ ಸಚಿನ್ ಇಬ್ಬರು ಪೇದೆಗಳನ್ನು ತಳ್ಳಿ, ಕಲ್ಲಿನಿಂದ ಹೊಡೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆಗ ಇನ್ಸ್ ಪೆಕ್ಟರ್ ದಿನೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಸರೆಂಡರ್ ಆಗುವಂತೆ ಸೂಚಿಸಿದ್ದರು.
ಪೊಲೀಸ್ ಸಿಬ್ಬಂದಿಯಾದ ಜಯಶಂಕರ ಮತ್ತು ಪ್ರಕಾಶ್ ನಾಯ್ಕ್ ಮೇಲೆ ಆರೋಪಿ ಸಚಿನ್ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್ಸ್ ಪೆಕ್ಟರ್ ದಿನೇಶ್ ಪಾಟೀಲ್, ಆರೋಪಿ ಸಚಿನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಪೊಲೀಸರು ಒಟ್ಟು ಮೂವರು ಆರೋಪಿಗಳ ಬಂಧಿಸಿದ್ದಾರೆ. ಹಿತೇಶ್, ಕಾರ್ತಿಕ್ ಹಾಗೂ ಸಚಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಚೌಕಿ ನರಸಿಂಹನ ಮೇಲೆ ಈ ಹಿಂದೆ ಹಲವಾರು ಕಳ್ಳತನದ ಪ್ರಕರಣಗಳು ದಾಖಲಾಗಿತ್ತು. ಕೊಲೆ ಆರೋಪಿ ಸಚಿನ್ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಶೀಟರ್ ಎಂಬುದು ತಿಳಿದು ಬಂದಿದೆ.