ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

Public TV
1 Min Read
CTD POLICE

ಚಿತ್ರದುರ್ಗ: ಪೊಲೀಸರು ಅಂದರೆ ಕೇವಲ ಕಾನೂನು ಪಾಲಕರು ಅಷ್ಟೇ ಅಂತ ಭಾವಿಸಿದ್ದೇವೆ. ಆದರೆ ಪೊಲೀಸರಲ್ಲೂ ಅದ್ಭುತ ಕಲಾವಿದರಿದ್ದಾರೆ ಎಂಬುದನ್ನ ಚಿತ್ರದುರ್ಗ ಪೊಲೀಸರು ಸಾಬೀತುಪಡಿಸಿದ್ದಾರೆ.

ದಿನ ನಿತ್ಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಅವರ ದೈನಂದಿನ ಒತ್ತಡದ ಬದುಕನ್ನು ಬದಿಗಿಟ್ಟು, ಮುಖಕ್ಕೆ ಬಣ್ಣ ಹಚ್ಚಿ ವೇದಿಕೆ ಮೇಲೆ ತಮ್ಮೊಳಗಿದ್ದ ಕಲೆಯನ್ನ ಹೊರಹಾಕುವ ಪ್ರಯತ್ನ ಮಾಡಿದ್ದಾರೆ. ಚಿತ್ರದುರ್ಗದ ಪೊಲೀಸ್ ಪೇದೆಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಮುಖಕ್ಕೆ ಬಣ್ಣ ಹಚ್ಚಿ  ಪೊಲೀಸ್ ಕವಾಯತು ಮೈದಾನದಲ್ಲಿ ನಾಟಕ ಪ್ರದರ್ಶಿಸಿದ್ದಾರೆ.

CTD

ಪೊಲೀಸ್ ಸಿಬ್ಬಂದಿ ಸಾಮಾಜಿಕ ಕಳಕಳಿಯ ನಾಟಕವಾಡುವ ಮೂಲಕ ನೆರದಿದ್ದ ಜನರಿಗೆ ಜಾಗೃತಿ ಮೂಡಿಸುವ ನೆಪದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನ ಹೊರಹಾಕಿದ್ದಾರೆ. ಈ ಸದಾವಕಾಶವನ್ನ ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಬಂದಿರುವ ಖಡಕ್ ಎಸ್‍ಪಿ ಡಾ.ಅರುಣ್ ಕಲ್ಪಿಸಿದ್ದರು.

ಪೊಲೀಸ್ ಪೇದೆಗಳಿಗೆ ಮನರಂಜನೆ ನೀಡುವ ಮೂಲಕ ಅವರ ಒತ್ತಡವನ್ನ ನಿವಾರಣೆ ಮಾಡುವುದಕ್ಕೆ ಮುಂದಾದ ಎಸ್‍ಪಿ ಸಾಹೇಬ್ರು, ಆಡಿಶನ್ ಮಾಡಿ ಅವರಲ್ಲಿ ಸೂಕ್ತ ಪ್ರತಿಭೆ ಇರುವವರನ್ನು ಆಯ್ಕೆ ಮಾಡಿದ್ದರು. ಬಳಿಕ ಅವರಿಂದ `ಅಣ್ಣನ ಒಡಲು ಬಂಗಾರದ ಕಡಲು’ ಎಂಬ ಸಾಮಾಜಿಕ, ಕೌಟುಂಬಿಕ ಹಾಸ್ಯಭರಿತ ನಾಟಕವನ್ನ ಪ್ರದರ್ಶಿಸಿದ್ದರು.

CTD 2

ಈ ಕೌಟುಂಬಿಕ ಸಮಸ್ಯೆ ಕುರಿತ ನಾಟಕ ವೀಕ್ಷಿಸಲು ಪೂರ್ವ ವಲಯದ ಡಿಐಜಿ ಬಿ.ದಯಾನಂದ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ್, ಜಿಲ್ಲಾಧಿಕಾರಿ ವಿನೋದ ಪ್ರಿಯಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಚಿತ್ರದುರ್ಗ ಡಿವೈಎಸ್‍ಪಿ ಸಂತೋಷ್ ಅವರ ನೃತ್ಯದ ಝಲಕ್ ವೀಕ್ಷಿಸಿ ಫುಲ್ ಎಂಜಾಯ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *