ಬೆಳಗಾವಿ/ಚಿಕ್ಕೋಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರನ್ನು ಹೊಡೆದು ಮನೆಗೆ ಕಳುಹಿಸುವುದರಲ್ಲೇ ಬ್ಯುಸಿಯಿರುವ ಪೊಲೀಸರು ಇಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ನೇತೃತ್ವದಲ್ಲಿ ಸಂಗ್ರಹಿಸಿದ್ದ ಆಹಾರ ವಸ್ತುಗಳು ಹಾಗೂ ದಿನ ಬಳಕೆ ವಸ್ತುಗಳನ್ನು ದಿನಗೂಲಿ ಮೇಲೆ ದುಡಿಯುವ ಬಡವರಿಗೆ ನೀಡಿ ಮಾದರಿಯಾಗಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕಕರಿಗೆ ಸಹಾಯಕ್ಕಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಮುಂದೆ ಬಂದಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಠದ ವತಿಯಿಂದ ಪ್ರತಿ ಕುಟುಂಬದಕ್ಕೆ ಎರಡು ಕೆಜಿ ಅಕ್ಕಿ, ತಲಾ ಒಂದು ಕೆಜಿ ಸಕ್ಕರೆ, ರವಾ, ಹಿಟ್ಟು, ಎಣ್ಣೆ, ಬಿಸ್ಕತ್ತು, ಬಟ್ಟೆ ಸೋಪ್, ಚಹಾಪುಡಿಯಂತಹ ದಿನಸಿ ವಸ್ತುಗಳನ್ನು ಪೊಲೀಸರ ಮೂಲಕ ಹುಕ್ಕೇರಿ ತಾಲೂಕಿನ ಜನರಿಗೆ ವಿತರಣೆ ಮಾಡಿದ್ದಾರೆ.
ಪೊಲೀಸರೇ ಇಂದು ಮನೆ ಮನೆಗೆ ತೆರಳಿ ಬಡ ಜನರಗೆ ದವಸಧಾನ್ಯಗಳನ್ನ ವಿತರಿಸಿದ್ದಾರೆ. ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಹುಕ್ಕೇರಿ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರು ಬಡವರ ಮನೆ ಮನೆಗಳಿಗೆ ತೆರಳಿ ಸಾಮಗ್ರಿಗಳನ್ನು ವಿತರಿಸಿದರು.
ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಇಂದು ದೇವಸ್ಥಾನಗಳು ಬಂದ್ ಆಗಿವೆ. ಇಂದು ವೈದ್ಯರು, ಪೊಲೀಸರು ಸ್ವಚ್ಛತಾ ಕೆಲಸ ಮಾಡುವ ಜನರೇ ನಮಗೆ ದೇವರುಗಳು. ಹಾಗಾಗಿ ಅವರ ಕೆಲಸಗಳನ್ನು ಮೆಚ್ಚಬೇಕು ಮನೆಯಲ್ಲಿದ್ದು, ಕೊರೊನಾ ವಿರುದ್ಧ ಹೋರಾಡಬೇಕು ಎಂದು ಕರೆ ಕೊಟ್ಟಿದ್ದಾರೆ.