ಹುಬ್ಬಳ್ಳಿ: ಸಿನಿಮಾ ಶೈಲಿಯಲ್ಲಿ ಹಿಟ್ ಆ್ಯಂಡ್ ರನ್ ಅಪಘಾತ ಹುಬ್ಬಳ್ಳಿಯಲ್ಲಿ (Hubballi) ನಡೆದಿದ್ದು, ಅಪಘಾತ (Accident) ಮಾಡಿದ ಉದ್ಯಮಿ ಮಗನನ್ನು ಶಿಕ್ಷೆಯಿಂದ ಪಾರು ಮಾಡುವ ಹುನ್ನಾರ ನಡೆದಿರುವ ಆರೋಪ ಕೇಳಿ ಬರುತ್ತಿದೆ.
ಗಣೇಶ್ ಬಡಿಗಣ್ಣವರ ಎಂಬಾತ ಅಪಘಾತದಲ್ಲಿ ಮೃತಪಟ್ಟ ಅಮಾಯಕ. ರವಿವಾರ ಮಧ್ಯರಾತ್ರಿ ನಗರದ ಸಿದ್ದೇಶ್ವರ ಸರ್ಕಲ್ ಬಳಿ ಹೋಂಡಾ ಆ್ಯಕ್ಟೀವಾ ವಾಹನದಲ್ಲಿ (Bike) ಗಣೇಶ್ ಮನೆಗೆ ತೆರಳುತ್ತಿದ್ದ. ಈ ವೇಳೆ ವಾಹನಕ್ಕೆ ವೇಗವಾಗಿ ಬಂದ ಕಾರ್ (Car) ಡಿಕ್ಕಿಯಾದ ಪರಿಣಾಮ ಗಣೇಶ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ಅಪಘಾತ ಮಾಡಿದ ವ್ಯಕ್ತಿ ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಿತ ಸ್ಟೀಲ್ ವ್ಯಾಪಾರಿ ಮಗ ಎನ್ನಲಾಗುತ್ತಿದೆ. ಪಾರ್ಟಿಯೊಂದಕ್ಕೆ ತೆರಳಿದ್ದ ಉದ್ಯಮಿ ಮಗ ಕುಡಿದ ಮತ್ತಿನಲ್ಲಿ ಈ ಅಪಘಾತ ಮಾಡಿದ್ದು, ಅಪಘಾತ ಬಳಿಕ ಉದ್ಯಮಿಯ ಮಗ ತನ್ನ ಚಾಲಕನಿಗೆ ಕಾರ್ ಕೊಟ್ಟು ಪರಾರಿಯಾಗಿದ್ದಾನೆ.
ಮೃತ ಗಣೇಶ್ ಹುಬ್ಬಳ್ಳಿಯ ವಿದ್ಯಾನಗರ ಬನಶಂಕರಿ ಬಡವಾಣೆ ನಿವಾಸಿ. ಗಣೇಶ್ ಒಬ್ಬನೇ ಮಗ, ತಂದೆ ತೀರಿ ಹೋಗಿದ್ದು, ತಾಯಿಯನ್ನ ಈತನೇ ನೋಡಿಕೊಳ್ಳುತ್ತಿದ್ದ. ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ಕೆಲಸ ಮುಗಿಸಿ ಬರೋವಾಗ ಅಪಘಾತದಲ್ಲಿ ಮೃತನಾಗಿದ್ದಾನೆ. ಇದ್ದ ಒಬ್ಬನೇ ಮಗನನ್ನ ಕಳೆದುಕೊಂಡು ತಾಯಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು
ಅಪಘಾತ ಮಾಡಿ ಉದ್ಯಮಿ ಮಗ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಘಟನೆಗೆ ಸಂಬಂಧಿಸಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದು ಮೂರು ದಿನವಾದರೂ ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಹೀಗಾಗಿ ಇಡೀ ಪ್ರಕರಣವನ್ನೆ ಪೊಲೀಸರು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ – ಪೊಲೀಸರಿಗೆ ವಾರ್ನಿಂಗ್ ನೀಡಿದ ಡಿಕೆಶಿ