ತುಮಕೂರು: ವಾಲ್ಮೀಕಿ ವಿಗ್ರಹ ಸ್ಥಾಪನೆಯ ವಿವಾದದ ಗಲಾಟೆಯಲ್ಲಿ ಪೊಲೀಸ್ ಪೇದೆ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ಆವಾಜ್ ಹಾಕಿದ್ದಾರೆ. ಪೊಲೀಸ್ ಪೇದೆಯ ಈ ದರ್ಪದ ಮಾತಿಗೆ ಆಕ್ರೋಶಗೊಂಡ ನಾಯಕ ಸಮುದಾಯದ ಯುವಕರು ಪೇದೆಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ಒಬಳಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ವೈ.ಎನ್.ಹೊಸಕೋಟೆ ಠಾಣೆಯ ಪೇದೆ ಶಿವರಾಜ್ ಸಾರ್ವಜನಿಕರ ಎದುರು ದರ್ಪ ತೋರಿದ್ದಾರೆ.
ಒಬಳಾಪುರ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಯ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಈ ಪುತ್ಥಳಿ ನಿರ್ಮಾಣವಾಗುತ್ತಿದ್ದ ಜಾಗ ನಮಗೆ ಸೇರಿದ್ದು ಎಂದು ಗೊಲ್ಲ ಸಮುದಾಯದವರು ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ನಿಲ್ಲಿಸಿ ಎಂದು ಹೇಳಲು ಪೇದೆ ಶಿವರಾಜ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಮಾಧಾನದಿಂದ ತಿಳಿ ಹೇಳುವುದನ್ನು ಬಿಟ್ಟು ಆವಾಜ್ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪೇದೆಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.