ಚೆನ್ನೈ: ಗಡುವನ್ನು ಮೀರಿ ರಾತ್ರಿ 10 ಗಂಟೆಯ ನಂತರವೂ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಹಾಗೂ ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (K.Annamalai) ವಿರುದ್ಧ ಕೊಯಮತ್ತೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಾನೂನು ಬಾಹಿರ ಸಭೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಡುವು ಮೀರಿ ಬಿಜೆಪಿ ಪ್ರಚಾರ ನಡೆಸಿದ್ದಕ್ಕೆ ಡಿಎಂಕೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಿಆರ್ಎಸ್ ನಾಯಕಿ 3 ದಿನ ಸಿಬಿಐ ಕಸ್ಟಡಿಗೆ
ಸೆಕ್ಷನ್ 143, 341 ಮತ್ತು 290 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಡಿಎಂಕೆ ನೀಡಿದ ದೂರಿನ ಮೇಲೆ ಬಿಜೆಪಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಸೋಲಿನ ಭಯದಿಂದ ಭಯೋತ್ಪಾದನೆ ಮತ್ತು ಗಲಭೆಗಳನ್ನು ಪ್ರಚೋದಿಸುತ್ತಾರೆ. ದುರಹಂಕಾರದ ಬಗ್ಗೆ ಮಾತನಾಡುವ ಪ್ರಧಾನಿಗಳು, ಅಣ್ಣಾಮಲೈ ಅವರಿಗೆ ಜ್ಞಾನಾರ್ಜನೆ ನೀಡಬೇಕು ಎಂದು ಡಿಎಂಕೆ ವಕ್ತಾರ ಎ.ಸರವಣನ್ ಹೇಳಿದ್ದರು. ಇದನ್ನೂ ಓದಿ: 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ
ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ರಾತ್ರಿ 10 ಗಂಟೆಯ ನಂತರ ಜನರನ್ನು ಭೇಟಿ ಮಾಡಲು ನನಗೆ ಎಲ್ಲ ಹಕ್ಕಿದೆ. ಯಾವ ಚುನಾವಣಾ ಆಯೋಗವು ನಿಮ್ಮನ್ನು ತಡೆಯುತ್ತದೆ? ಆದೇಶ ಎಲ್ಲಿದೆ, ನೀವು ನನಗೆ ತೋರಿಸುತ್ತೀರಾ ಎಂದು ಅಣ್ಣಾಮಲೈ ಕೇಳಿದ್ದಾರೆ.