ಬೆಂಗಳೂರು: ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿ ಇಂದಿಗೆ 18ನೇ ದಿನವಾಗಿದೆ. ಆದರೂ ಕೆಲವರು ಸುಖಾಸುಮ್ಮನೇ ಓಡಾಡುತ್ತಿದ್ದಾರೆ. ಹೀಗಾಗಿ ಅನಾವಶ್ಯಕವಾಗಿ ರಸ್ತೆಗೆ ಬಂದ ಸವಾರರಿಗೆ ನೆಲಮಂಗಲ ಪೊಲೀಸರು ಎಚ್ಚರಿಕೆ ನೀಡಿ, ವಾಹನ ಸೀಜ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಬೆಳಗ್ಗೆ 6 ರಿಂದ 10ವರಗೆ ಮಾತ್ರ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಕೆಲವರು ಅನೇಕ ನೆಪ ಹೇಳಿಕೊಂಡು ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ನೆಲಮಂಗಲ ಟೌನ್ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಲಾಕ್ಡೌನ್ ಇದ್ದರೂ ಅನಾವಶ್ಯಕವಾಗಿ ಹೊರಗೆ ಬಂದ ವಾಹನಗಳಿಗೆ ಬ್ರೇಕ್ ಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ.
ನೆಲಮಂಗಲ ಟೌನ್ ಪಿಎಸ್ಐ ಮಂಜುನಾಥ್ ನೇತೃತ್ವದಲ್ಲಿ ಅನಗತ್ಯ ಸಂಚಾರದ ಬೈಕ್ಗಳ ತಪಾಸಣೆ ನಡೆಯುತ್ತಿದೆ. ಪುಂಡಪೋಕರಿಗಳ ವಾಹನ ಹಾಗೂ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಈ ಮೂಲಕ ಟ್ರಾಫಿಕ್ ಹಾಗೂ ಟೌನ್ ಪೊಲೀಸರ ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಈಗಾಗಲೇ ನೆಲಮಂಗಲ ತಾಲೂಕಿನಲ್ಲಿ ಹಲವಾರು ವಾಹನಗಳು ಸೀಜ್ ಆಗಿವೆ.