ಜೈಪುರ: 9 ಜನ ಮುಸ್ಲಿಂ ಪೊಲೀಸರಿಗೆ ಗಡ್ಡ ತೆಗೆಯುವಂತೆ ನೀಡಿದ್ದ ಆದೇಶವನ್ನು ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪ್ಯಾರಿಸ್ ದೇಶ್ಮುಖ್ ಹಿಂಪಡೆದಿದ್ದಾರೆ.
ಗುರುವಾರ ಹೊರಡಿಸಿದ್ದ ಆದೇಶದಲ್ಲಿ ಒಂಬತ್ತು ಜನ ಮುಸ್ಲಿಂ ಪೊಲೀಸ್ ಸಿಬ್ಬಂದಿಗೆ ತಮ್ಮ ಗಡ್ಡವನ್ನು ತೆಗೆಯಬೇಕು ತಿಳಿಸಲಾಗಿತ್ತು. ಗಡ್ಡ ಬಿಡಲು ಒಟ್ಟು 32 ಮುಸ್ಲಿಂ ಪೊಲೀಸರಿಗೆ ಅವಕಾಶ ನೀಡಲಾಗಿತ್ತು. ಆದರೆ ಗುರುವಾರ ನೀಡಿದ ಆದೇಶದಲ್ಲಿ ಒಂಬತ್ತು ಜನ ಪೊಲೀಸರನ್ನು ಹೊರಗೆ ಇಡಲಾಗಿತ್ತು. ಆದೇಶ ಪ್ರಕಟಣೆ ಬಳಿಕ ಪೊಲೀಸರು ಪಕ್ಷಪಾತವಿಲ್ಲದೆ ಕೆಲಸ ಮಾಡುವುದು ಮಾತ್ರವಲ್ಲ, ಏಕರೂಪವಾಗಿ ಕಾಣಬೇಕು ಎಂದು ಎಸ್ಪಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ರಾಜ್ಯ ಸರ್ಕಾರದ ನಿಬಂಧನೆ ಪ್ರಕಾರ ಗಡ್ಡವನ್ನು ಬಿಡಲು ಪೊಲೀಸರಿಗೆ ಅನುಮತಿ ನೀಡುವ ಅಧಿಕಾರ ಆಯಾ ವಿಭಾಗದ ಮುಖ್ಯಸ್ಥರಿಗೆ ಇರುತ್ತದೆ. ಇದೇ ನಿಬಂಧನೆಯಡಿ 32 ಪೊಲೀಸರಿಗೆ ಅನುಮತಿ ನೀಡಲಾಗಿತ್ತು. ಆದರೆ 9 ಪೊಲೀಸರ ಅನುಮತಿಯನ್ನು ರದ್ದು ಪಡಿಸಲಾಗಿದೆ. ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಲಾಗುವುದು ಎಂದು ಅನಿಲ್ ಪ್ಯಾರಿಸ್ ದೇಶ್ಮುಖ್ ಸ್ಪಷ್ಟಪಡಿಸಿದ್ದರು.
ಶುಕ್ರವಾರ ಅದೇಶವನ್ನು ಹಿಂಪಡೆದು ಮಾತನಾಡಿದ ಎಸ್ಪಿ, ಇದೊಂದು ಆಡಳಿತಾತ್ಮಕ ಆದೇಶವಾಗಿತ್ತು. ಪೊಲೀಸರು ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ. ಇನ್ನುಳಿದ ಒಂಬತ್ತು ಜನ ಗಡ್ಡ ಬಿಡಬಹುದಾಗಿದೆ ಎಂದಿದ್ದಾರೆ.